ಕಂಗ್ರಾಳಿಯಲ್ಲಿ ಐತಿಹಾಸಿಕ ಮಹಾಲಕ್ಷ್ಮೀ ಉತ್ಸವ

ಏಪ್ರಿಲ್ 28 ರಿಂದ ಅದ್ಧೂರಿ ಜಾತ್ರೆ ಆರಂಭ
ಲಕ್ಷಾಂತರ ಭಕ್ತರ ಆಗಮನಕ್ಕೆ ಭರ್ಜರಿ ತಯಾರಿ
ಜಿಲ್ಲಾಡಳಿತದಿಂದ ಸಕಲ ಸೌಲಭ್ಯಗಳ ಭರವಸೆ
ಬೆಳಗಾವಿ ತಾಲೂಕಿನ ಕಂಗ್ರಾಳಿ ಬುದ್ರುಕ ಗ್ರಾಮದಲ್ಲಿ ಬರೋಬ್ಬರಿ 43 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮಹಾಲಕ್ಷ್ಮೀ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 28 ರಿಂದ ನಡೆಯಲಿರುವ ಈ ಬೃಹತ್ ಧಾರ್ಮಿಕ ಸಭೆಯ ಯಶಸ್ಸಿಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಿದ್ಧತಾ ಸಭೆ ನಡೆದಿದ್ದು, ಲಕ್ಷಾಂತರ ಭಕ್ತರ ಸ್ವಾಗತಕ್ಕೆ ಗ್ರಾಮ ಸಜ್ಜಾಗುತ್ತಿದೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ ಬುದ್ರುಕ ಗ್ರಾಮದ ಇತಿಹಾಸದಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎನ್ನಲಾದ ಮಹಾಲಕ್ಷ್ಮೀ ಯಾತ್ರೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಅಧ್ಯಕ್ಷತೆಯಲ್ಲಿ ಇಂದು ಪರಾಮರ್ಶನಾ ಸಭೆ ಜರುಗಿತು. ಯಾತ್ರೆಯ ಸಂದರ್ಭದಲ್ಲಿ ಪ್ರತಿದಿನ ಸುಮಾರು ಒಂದೂವರೆಯಿಂದ ಎರಡು ಲಕ್ಷ ಭಕ್ತರು ಬರುವ ನಿರೀಕ್ಷೆಯಿದ್ದು, ಇದಕ್ಕಾಗಿ ಕಾಕತಿ, ಎಪಿಎಂಸಿ ಹಾಗೂ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲು ಸೂಚಿಸಲಾಯಿತು. ಇದೇ ವೇಳೆ ಜಿಲ್ಲಾಧಿಕಾರಿಗಳು ತಮ್ಮ ನಿಧಿಯಿಂದ ಗ್ರಾಮಕ್ಕೆ ಎರಡು ಹೈಮಾಸ್ಟ್ ದೀಪಗಳನ್ನು ಘೋಷಿಸಿ, ಸಾರ್ವಜನಿಕ ಸೌಲಭ್ಯಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅನುದಾನದಡಿ ಸುಮಾರು 15 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮದಲ್ಲಿ ಕೈಗೊಳ್ಳಲಾಗುತ್ತಿದ್ದು, ಜಾತ್ರೆಗೂ ಮುನ್ನ ಇವು ಪೂರ್ಣಗೊಳ್ಳಲಿವೆ ಎಂದರು. ಒಂಬತ್ತು ದಿನಗಳ ಕಾಲ ನಿರಂತರ ವಿದ್ಯುತ್, ಕುಡಿಯುವ ನೀರು, ತುರ್ತು ಆರೋಗ್ಯ ಸೇವೆ ಮತ್ತು ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಹಾಯಕ ಆಯುಕ್ತ ಶ್ರವಣ ನಾಯಕ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಹಾಲಕ್ಷ್ಮೀ ಉತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
