Bailahongala

ಗ್ರಾಮ ದೇವಿಯ ಜಾತ್ರೆಯಲ್ಲಿ ಭಂಡಾರಮಯವಾದ ಕಲ್ಲೂರು ಗ್ರಾಮ

Share

• ಕಲ್ಲೂರು ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಸಂಭ್ರಮ
• ದೇವಿಯ ಹೊನ್ನಾಟಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು
• ಭಂಡಾರದಲ್ಲಿ ಮಿಂದೆದ್ದ ಬೈಲಹೊಂಗಲದ ಕಲ್ಲೂರು
• ಸಾಂಸ್ಕೃತಿಕ ಕಲೆಗಳ ಮೂಲಕ ಅನಾವರಣಗೊಂಡ ವೈಭವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಹಲವು ವರ್ಷಗಳ ಬಳಿಕ ಗ್ರಾಮದೇವಿ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ಜರುಗುತ್ತಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ಪ್ರತಿದಿನವೂ ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ, ಭಜನೆ, ಅಭಿಷೇಕ ಹಾಗೂ ಕುಂಭೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ದೇವಿಯ ದರ್ಶನಕ್ಕಾಗಿ ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದು, ಅವರಿಗಾಗಿ ಪ್ರತಿದಿನ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.
ನಿನ್ನೆ ನಡೆದ ದೇವಿಯ ‘ಹೊನ್ನಾಟ’ ಕಾರ್ಯಕ್ರಮ ಭಕ್ತರ ವಿಶೇಷ ಗಮನ ಸೆಳೆಯಿತು. ಭಕ್ತರು ದೇವಿಗೆ ಭಂಡಾರ ಅರ್ಪಿಸುವ ಮೂಲಕ ಇಡೀ ಗ್ರಾಮವೇ ಭಂಡಾರಮಯವಾಗಿತ್ತು. ಜಾತ್ರೆಯ ಕೊನೆಯ ದಿನದಂದು ಭಕ್ತಾದಿಗಳು ದೇವಿಗೆ ಉಡಿತುಂಬಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ನಮ್ಮ ಗ್ರಾಮದಲ್ಲಿ ಎರಡು ದಿನಗಳ ಕಾಲ ಬಸವೇಶ್ವರ ಜಾತ್ರೆ ಹಾಗೂ ಐದು ದಿನಗಳ ಕಾಲ ದೇವಿಯ ಹೊನ್ನಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯರ ಮಾರ್ಗದರ್ಶನದಲ್ಲಿ ಈ ಮಹೋತ್ಸವ ಅತಿ ವಿಜೃಂಭಣೆಯಿಂದ ನಡೆದಿದೆ. ನೆರೆಹೊರೆಯ ಗ್ರಾಮಸ್ಥರು ಸಹ ಆಗಮಿಸಿ ನಮಗೆ ತುಂಬು ಹೃದಯದ ಸಹಕಾರ ನೀಡಿದ್ದಾರೆ. ಈ ಜಾತ್ರಾ ಮಹೋತ್ಸವ ನಮಗೆ ಅಪಾರ ಸಂತೋಷ ತಂದಿದೆ,” ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಇನ್ನು ಪ್ರತಿದಿನ ಸಂಜೆ ವಿವಿಧ ಕಲಾತಂಡಗಳಿಂದ ರಸಮಂಜರಿ, ಭಜನೆ, ಡೊಳ್ಳುವಾದ್ಯ ಹಾಗೂ ನಾಟಕ ಸೇರಿದಂತೆ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳುತ್ತಿದೆ. ಗ್ರಾಮದ ವಿವಿಧ ಸಂಘಟನೆಗಳು, ಯುವಕರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಜಾತ್ರೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

Tags:

error: Content is protected !!