ಗುರ್ಲಾಪುರ್ ಕ್ರಾಸದಲ್ಲಿ ಕಬ್ಬಿನ ದರಕ್ಕಾಗಿ ಮಾಡಿರುವ ಹೋರಾಟದ ನನಗೆ ದೊರೆತ ಆಶೀರ್ವಾದ ಹಳಿಂಗಳಿಯ ಜೈನಮಠದ ಪರಮಪೂಜ್ಯ ಕುಲಭೂಷಣ ಮುನಿ ಮಹಾರಾಜರಿಂದ ದೊರೆತಿದೆ. ನಾನು ಅವರ ಆಶೀರ್ವಾದಕ್ಕೆ ಹೋದಾಗ ನಿನ್ನಿಂದ ನಾಡಿನ ಸೇವೆ ಆಗಲಿದೆ ಎಂದು ಮಾಡಿದ ಆಶೀರ್ವಾದ ಫಲಶ್ರುತಿವಾಗಿ ರೈತರ ಹೋರಾಟ ಯಶಸ್ವಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಶೇಡಬಾಳದಲ್ಲಿ ಹೇಳಿದರು.
ಶುಕ್ರವಾರ ಸಂಜೆ ಶೇಡಬಾಳದ ಆಚಾರ್ಯ ಶಾಂತಿಸಾಗರ್, ಜೈನ ಆಶ್ರಮದಲ್ಲಿ ಶಾಂತಿಸಾಗರ್ ಪ್ರಾಥಮಿಕ, ಪ್ರೌಢ, ವಸತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ನಿಮಿತ್ಯ ಅತಿಥಿಗಳಾಗಿ ಆಗಮಿಸಿ ಶಶಿಕಾಂತ ಗುರೂಜಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಮುಂದುವರೆದು ಮಾತನಾಡುವಾಗ ಪ್ರಥಮಾಚಾರ್ಯ ಶಾಂತಿಸಾಗರ ಇವರ ಸ್ಥಾಪಿಸಿದ ಆಶ್ರಮದಲ್ಲಿ ವಿದ್ಯಾರ್ಥಿಗಳು ಬೋಧನೆ ಮಾಡುತ್ತಿದ್ದು ಈ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ, ನೀಡಲಾಗುತ್ತಿದೆ ಇಲ್ಲಿ ವಿದ್ಯಾರ್ಥಿಗಳು ದೇಶಾದ್ಯಂತ ಸಂಸ್ಥೆಗೆ ಕೀರ್ತಿ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಜೈನ ಮುನಿ ಕುಲುಭೂಷಣ ಮಹಾರಾಜರು ಗುರ್ಲಾಪುರ್ ಕ್ರಾಸದಲ್ಲಿ ಪ್ರಾರಂಭಿಸಿದ ಹೋರಾಟಕ್ಕೆ ಒಂದು ಲಕ್ಷ ರೂಪಾಯಿ ಆಹಾರಕ್ಕಾಗಿ ದೇನಿಗಿ ನೀಡಿದರು. ಅಲ್ಲದೆ ನನ್ನ ಹೋರಾಟ ಯಶಸ್ವಿಯಾಗಲಿ ಎಂದು ಮೂರು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಇಂತಹ ತ್ಯಾಗಮಯ ಧರ್ಮದಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರವಾಗುತ್ತಿದೆ ಎಂದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನದ ಒಂದು ಮನಕಲುಕುವ ಘಟನೆ ಉದಾಹರಣೆಯಾಗಿ ನೀಡಿದ ಶಶಿಕಾಂತ್ ಗುರೂಜಿ ಅವರು, ನ್ಯಾಯಾಲಯದಲ್ಲಿ ವಕಾಲತ್ತು ಮಾಡುತ್ತಿದ್ದ ವೇಳೆ ಅವರಿಗೆ ಒಂದು ಚೀಟಿ ಬಂತು. ಆ ಚೀಟಿಯನ್ನು ನೋಡಿದರೂ ಕೂಡ ಅವರು ಯಾವುದೇ ಆತಂಕ ತೋರಿಸದೆ ತಮ್ಮ ವಾದವನ್ನು ಮುಂದುವರಿಸಿದರು. ಇದನ್ನು ಗಮನಿಸಿದ ಬ್ರಿಟಿಷ್ ವಕೀಲರು ಆಶ್ಚರ್ಯಪಟ್ಟು, ಆ ಚೀಟಿಯಲ್ಲಿ ಏನಿತ್ತು ಎಂದು ವಿಚಾರಿಸಿದಾಗ, ಅದರಲ್ಲಿ ತಮ್ಮ ಪತ್ನಿ ನಿಧನರಾದ ಸುದ್ದಿಯಿತ್ತು ಎಂದು ಅಂಬೇಡ್ಕರ್ ಹೇಳಿದರು. ಆಗ ಬ್ರಿಟಿಷ್ ವಕೀಲರು “ಇಂತಹ ದುಃಖದ ಸುದ್ದಿ ಬಂದರೂ ನೀವು ತಕ್ಷಣ ಹೋಗಲಿಲ್ಲವೇ?” ಎಂದು ಕೇಳಿದಾಗ, ಅಂಬೇಡ್ಕರ್ ಅವರು, “ಇಲ್ಲಿ ೪೭ ಸ್ವಾತಂತ್ರ್ಯ ಹೋರಾಟಗಾರರ ಜೀವದ ಪ್ರಶ್ನೆ ಇದೆ. ನಾನು ಈ ವಾದವನ್ನು ಬಿಟ್ಟು ಹೋದರೆ ಅವರಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇತ್ತು. ನನ್ನ ಪತ್ನಿ ಮತ್ತೆ ಮರಳಿ ಬರುವುದಿಲ್ಲ, ಆದರೆ ಈ ಹೋರಾಟಗಾರರ ಜೀವ ಉಳಿಸುವುದು ನನ್ನ ಕರ್ತವ್ಯ” ಎಂದು ಅತ್ಯಂತ ಧೈರ್ಯದಿಂದ ಉತ್ತರಿಸಿದರು. ಅವರ ಈ ಕರ್ತವ್ಯನಿಷ್ಠೆ, ದೇಶಪ್ರೇಮ ಮತ್ತು ತ್ಯಾಗಭಾವವನ್ನು ಕಂಡು ಬ್ರಿಟಿಷ್ ವಕೀಲರು ಸಹ ದಂಗಾಗಿ ಹೋದರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಜೀವನವನ್ನು ಮಕ್ಕಳಿಗೆ ತಿಳಿಸಿ, ಉತ್ತಮ ಸಂಸ್ಕಾರ ಮತ್ತು ಕರ್ತವ್ಯಭಾವ ಬೆಳೆಸಬೇಕು ಎಂದು ಶಶಿಕಾಂತ್ ಗುರೂಜಿ ಪೋಷಕರಿಗೆ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಂದ್ರೆ ವಹಿಸಿದರು. ಸಮಾರಂಭದಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಅಲ್ಪಸಂಖ್ಯಾತರ ಇಲಾಖೆಯ ಪ್ರಥಮ ದರ್ಜೆ ಸಹಾಯಕ ರಾಜು ಖೆಮ್ಲಾಪುರ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.
ಸಮಾರಂಭದಲ್ಲಿ ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ್ ಬರಗಾಲೆ, ಶೇಡಬಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ಕಿರಣ ಯಂದಗೌಡರ, ಶುಭಂ ಪಾಟೀಲ, ಜಿನ್ನಪ್ಪಾ ನಾಂದನಿ, ಸುದರ್ಶನ ಪಾಟೀಲ್ ಸೇರಿದಂತೆ ಅನೇಕರು ಇದ್ದರು. ಮುಖ್ಯಾಧಿಪಕ್ ಚೇತನ್ ನಾಂದ್ರೆ ಸ್ವಾಗತಿಸಿ ವಂದಿಸಿದರು.
