ಅಮಾನತ್ತಿಗೊಳಗಾದ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಬಾಯಣ್ಣವರ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತೆಗೆದುಕೊಂಡ ಕ್ರಮದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪವನ್ ಪಾಟೀಲ್ ಎಂಬಾತರಿಂದ ತಮ್ಮ ಮೇಲೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

ನೂತನ ಎಸ್.ಡಿ.ಎಂ.ಸಿ ರಚನೆಗೆ ಸಂಬಂಧಿಸಿದಂತೆ ಚುನಾವಣೆಯನ್ನು ನಡೆಸಲಾಗಿದ್ದು, ನೋಡಲ್ ಅಧಿಕಾರಿ ಬಿ.ಆರ್.ಪಿ ಮಾಸ್ತಮರ್ಡಿ ಅವರಿಗೆ ಕರೆ ಮಾಡಿದಾಗ ಸರಿಯಾದ ಮಾರ್ಗದರ್ಶನ ನೀಡಲಿಲ್ಲ. ವಾಟ್ಸಪ್ ಮೆಸೇಜ್ ಮಾಡಿದಾಗ ಒಂದು ಮಗುವಿನ ಪಾಲಕರಿಗೆ ಒಂದೇ ಮತ ಹಾಕಬೇಕೆಂದು ಹೇಳಿದ್ದರು. ನಂತರ ಶಾಲೆಗೆ ಆಗಮಿಸಿದ ಬಿ.ಆರ್.ಪಿ ಮಾಸ್ತಮರ್ಡಿ ಅವರು ತಂದೆ-ತಾಯಿ ಇಬ್ಬರೂ ಕೂಡ ಮತ ಚಲಾಯಿಸಬೇಕೆಂದಾಗ ಗೊಂದಲ ಉಂಟಾದ ಹಿನ್ನೆಲೆ ಸಭೆಯನ್ನು ರದ್ಧುಪಡಿಸಿ ಮುಂದೂಡಲಾಯಿತು. ಪವನ್ ಪಾಟೀಲ್ ಎಂಬ ವ್ಯಕ್ತಿ ಮೊದಲಿನಿಂದಲೂ ತಮಗೆ ಕಿರುಕುಳ ನೀಡುತ್ತಿದ್ದು, ಇವರ ಒತ್ತಡದ ಹಿನ್ನೆಲೆ ಬಿಇಓ ಅವರು ತಮ್ಮನ್ನು ಅಮಾನತ್ತು ಮಾಡಿದ್ದಾರೆ. ಮಕ್ಕಳು ಮತ್ತು ಪಾಲಕರು ತಾವು ಶಾಲೆ ಬಿಟ್ಟು ಹೋಗದಂತೆ ತಡೆದಿದ್ದಾರೆ. ಪವನ್ ಪಾಟೀಲ್ ಅವರ ಮಕ್ಕಳು ನಮ್ಮ ಶಾಲೆಯಲ್ಲಿ ಕಲಿಯುತ್ತಿಲ್ಲ. ರಾಜಕಾರಣವನ್ನು ಬಿಟ್ಟು, ಬಡ ಮಕ್ಕಳ ಶಿಕ್ಷಣದ ಕಡೆ ಗಮನಹರಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೈಗೊಂಡ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಶಿಕ್ಷಣ ಸಚಿವರು ತಮ್ಮ ಸಮಸ್ಯೆಯನ್ನು ಆಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕಣ್ಣೀರು ಹಾಕಿದರು.
