ಖಾನಾಪೂರ ತಾಲೂಕಿನ ಚಾಪಗಾಂವ ಗ್ರಾಮದಲ್ಲಿ ಸಿಡಿಲು ಬಡಿದು 11 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಖಾನಾಪೂರ ತಾಲೂಕಿನ ಚಾಪಗಾಂವ ಗ್ರಾಮದ ಕೆರೆ ಪ್ರದೇಶದಲ್ಲಿರುವ ಹಂಪಣ್ಣವರ್ನ ಜಮೀನಿನಲ್ಲಿ ಬೈಲಹೊಂಗಲ ತಾಲೂಕಿನ ಹೊನ್ನೂರು ಗ್ರಾಮದ ಕುರಿಗಾಹಿ ಉಮೇಶ ಯಲ್ಲಪ್ಪ ಚಿಚ್ಚಡಿ ಕುರಿಗಳನ್ನು ಮೇಯಿಸುತ್ತಿದ್ದ. ಈ ವೇಳೆ ಏಕಾಏಕಿ ಗುಡುಗು ಮಿಂಚಿನಿಂದ ಕೂಡಿದ ಮಳೆ ಸುರಿಯಲಾರಂಭಿಸಿದೆ. ಜೋರಾದ ಸಿಡಿಲು ಬಡಿದ ಹಿನ್ನೆಲೆ ಹನ್ನೊಂದು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇದರಿಂದಾಗಿ ಕುರಿಗಾಹಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗಳ ನಷ್ಟವನ್ನು ಉಂಟಾಗಿದೆ. ಇನ್ನು ಅದೇ ರೀತಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಾರುತಿ ಚೋಪಡೆ ಅವರ ಜಮೀನಿನಲ್ಲಿದ್ದ ಮನೆಗೂ ಕೂಡ ಸಿಡಿಲು ಬಡಿದಿದೆ. ಮನೆಯಲ್ಲಿದ್ದ ಟಿವಿ, ಇನವರ್ಟರ್, ಫ್ಯಾನ್ ಮತ್ತು ಮನೆಯಲ್ಲಿದ್ದ ಎಲ್ಲಾ ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.

ಚಾಪಗಾಂವನಲ್ಲಿ ಬಿರುಗಾಳಿ, ಮಳೆ ಮತ್ತು ಸಿಡಿಲಿನಿಂದಾಗಿ ಅನೇಕ ಜನರ ವಿದ್ಯುತ್ ಯಂತ್ರಗಳು ಹಾನಿಗೊಳಗಾಗಿವೆ. ಮಳೆಯಿಂದಾಗಿ ಕೆಲಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ನಂದಗಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ. ಎಎಸ್ಐ ಶ್ರೀನಿವಾಸ ಹಾಗೂ ಪೋಲಿಸರಾದ ಮಹೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.