ಬೆಳಗಾವಿ ನಗರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ಬಂದಿದ್ದು, ಯಾವುದೇ ಕಾಮಗಾರಿ ವಿಳಂಬ ಆಗದಂತೆ ತ್ವರಿತವಾಗಿ ಪೂರ್ಣ ಮಾಡಬೇಕು ಎಂದು ಉತ್ತರ ಶಾಸಕ ಅನಿಲ ಬೆನಕೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಜೊತೆ ಸಭೆ ನಡೆಸಿದ ಶಾಸಕ ಅನಿಲ ಬೆನಕೆ ಉತ್ತರ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು 52 ಕೋಟಿ ರೂಪಾಯಿ ಹೆಚ್ಚಿನ ಅನುದಾನ ಬಿಡುಗಡೆ ಆಗಿದೆ. ಜೊತೆಗೆ ಲೋಕೋಪಯೋಗಿ ಇಲಾಖೆಗೆ 47 ಕೋಟಿ, 2 ಕೋಟಿ ಮುಜರಾಯಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ 3 ಕೋಟಿ ಬಿಡುಗಡೆ ಆಗಿದೆ. ಈ ಎಲ್ಲಾ ಅನುದಾನವನ್ನು ಬಳಸಿಕೊಂಡು, ದೇವಸ್ಥಾನಗಳ ಅಭಿವೃದ್ಧಿ, ರಸ್ತೆ, ಚರಂಡಿ, ಡ್ರ್ಯಾನೇಜ್, ಕೆರೆಗಳ ಅಭಿವೃದ್ಧಿ, ನಾಲೆಗಳ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಆದಷ್ಟು ಬೇಗ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ ಆಂಡ್ ಟಿ ಕಂಪನಿಯ ಆಮೆಗತಿಯ ಕಾಮಗಾರಿಗೆ ನಗರದಲ್ಲಿ ಆಗಬೇಕಿದ್ದ ಅನೇಕ ರಸ್ತೆ, ಚರಂಡಿ ಕಾಮಗಾರಿಗಳ ಅಭಿವೃದ್ಧಿ ವಿಳಂಬ ಆಗುತ್ತಿದೆ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ. ಉತ್ತರ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಎಲ್ ಆ್ಯಂಡ್ ಟಿ ಕಂಪನಿಯರು ಕೆಲಸ ಮಾಡಬೇಕು ಅಲ್ಲಿ ಕಾಲಮಿತಿಯೊಳಗಡೆ ಕೆಲಸ ಪೂರ್ಣ ಗೊಳಿಸಬೇಕು. ನಗರದಲ್ಲಿ ರಸ್ತೆಗಳು ಆಗುವುದಕ್ಕಿಂತ ಮುಂಚೆ ಗ್ಯಾಸ್ ಲೈನ್ಗಳ ಅಳವಡಿಕೆ, ಅಂಡರ್ ವಿದ್ಯುತ್ ಕೇಬಲ್ಗಳ ಅಳವಡಿಕೆ ಹಾಗೂ ನೀರಿನ ಪೈಗಳ ಅಳವಡಿಕೆ ಮಾಡಿಕೊಳ್ಳಬೇಕು.
ನಿಮ್ಮ ಕೆಲಸಗಳು ಕಾಲಮಿತಯೋಳಗೆ ಪೂರ್ಣಗೊಂಡರೆ ರಸ್ತೆ ಕಾಮಗಾರಿಗೆ ವಿಳಂಬ ಆಗುವುದಿಲ್ಲ ಎಂದು ಎಲ್ ಆ್ಯಂಡ್ ಟಿ ಕಂಪನಿ, ಗ್ಯಾಸ್ ಕಂಪನಿ ಹಾಗೂ ಕೆಬಿ ಅಧಿಕಾರಿಗಳಿಗೆ ಶಾಸಕ ಅನಿಲ ಬೆನಕೆ ತಿಳಿಸಿದರು.
ಸಭೆಯಲ್ಲಿ ಕೆಯುಡಬ್ಲುಎಸ್ ಕಾರ್ಯನಿರ್ವಾಹಕ ಅಭಿಯಂತ ಪ್ರಸನ್ನಕುಮಾರ್, ಬುಡಾ ಅಭಿಯಂತ ಎಂ.ವ್ಹಿ.ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.