Belagavi

21ನೇ ಶತಮಾನ ತಂತ್ರಜ್ಞಾನ, ಆವಿಷ್ಕಾರ, ಜ್ಞಾನದ ಯುಗ: ಸಚಿವ ಅಶ್ವತ್ಥನಾರಾಯಣ

Share

21ನೇ ಶತಮಾನ ತಂತ್ರಜ್ಞಾನ, ಆವಿಷ್ಕಾರ, ಜ್ಞಾನದ ಯುಗವಾಗಿದೆ. ನಾವು ಎಷ್ಟು ಬೇಗ ಇದನ್ನು ಅಳವಡಿಸಿಕೊಳ್ಳುತ್ತೇವೆ ಎಂಬುದು ಬಹುಮುಖ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ತಿಳಿಸಿದರು.

ಬುಧವಾರ ಬೆಳಗಾವಿಯ ವಿಟಿಯು ಕ್ಯಾಂಪಸ್‍ನ ಅಡಿಟೋರಿಯಂ ಹಾಲ್‍ನಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಟೆಕ್ ಭಾರತ್-2022ರ 3ನೇ ಎಡಿಸನ್‍ನ ಅಗ್ರಿಟೆಕ್ ಮತ್ತು ಫೂಡ್‍ಟೆಕ್ ಪ್ರಿ-ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಡಾ.ಅಶ್ವತ್ಥನಾರಾಯಣ ತಂತ್ರಜ್ಞಾನ ಇಡೀ ಸಮಾಜದಲ್ಲಿ ಸಂಚಲನ ಮೂಡಿಸುತ್ತಿದೆ. ದೊಡ್ಡ ದೊಡ್ಡ ಸಮಸ್ಯೆ, ಸವಾಲುಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸುವ, ಬಯಸಿದ್ದಕ್ಕಿಂತ ಹೆಚ್ಚು ಪರಿಹಾರ ಸಿಗುತ್ತಿದೆ. ಲಘು ಉದ್ಯೋಗ ಭಾರತಿ ಟೆಕ್‍ಭಾರತ್ ಮೂಲಕ ಸತತವಾಗಿ ಸಮಾಜದ ಸವಾಲು, ಸಮಸ್ಯೆಗಳನ್ನು ಅರಿತುಕೊಂಡು ಕೆಲಸ ಮಾಡುತ್ತಿದೆ. ನಮ್ಮ ಆಧಾರಸ್ತಂಭವಾಗಿರುವ ಕೃಷಿ ಕ್ಷೇತ್ರ. ಶೇ.60ಕ್ಕಿಂತ ಹೆಚ್ಚು ಜನರು ಕೃಷಿ ಕ್ಷೇತ್ರವನ್ನೇ ಅವಲಂಬಿಸಿದ್ದಾರೆ. ಈ ಜನರ ಭವಿಷ್ಯ ಉತ್ತಮವಾಗಿರಬೇಕು, ಗುಣಮಟ್ಟ ಚನ್ನಾಗಿರಬೇಕು, ಅವರಿಗೆ ಗೌರವ, ಸಂತೋಷ ಸಿಗಬೇಕು. ಈ ಮೂಲಕ ಅವರ ಬದುಕು ಹಸನಾಗಬೇಕು, ಅವರ ಬದುಕು ಚೆನ್ನಾಗಿಯಾದರೆ ನಮ್ಮೆಲ್ಲರ ಬದುಕು ಚನ್ನಾಗಿ ಆಗಲು ಸಾಧ್ಯವಾಗುತ್ತದೆ. ನಮ್ಮ ಜಿಡಿಪಿಯಲ್ಲಿ 100 ರೂಪಾಯಿ ವಹಿವಾಟಿನಲ್ಲಿ ಕೇವಲ 15 ರೂಪಾಯಿ ಮಾತ್ರ ವ್ಯವಸಾಯ ಕ್ಷೇತ್ರದಲ್ಲಿ ಆಗುತ್ತಿದೆ. ಹೀಗಾಗಿ ಎಲ್ಲೊ ಒಂದು ಕಡೆ ವ್ಯತ್ಯಾಸ ಆಗುತ್ತಿದೆ. ಈ ವ್ಯತ್ಯಾಸವನ್ನು ಸರಿಪಡಿಸುವ ಅವಶ್ಯಕತೆಯಿದೆ. ಹೆಮ್ಮೆ ಪಡುವ ರೀತಿಯಲ್ಲಿ ಕೃಷಿ ಕ್ಷೇತ್ರವನ್ನು ಸುಧಾರಣೆ ಮಾಡಬೇಕಿದೆ ಎಂದರು.

ಇನ್ನು ನಗರ ಪ್ರದೇಶಗಳಿಗೆ ಅತೀ ಹೆಚ್ಚು ಜನರು ವಲಸೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿತ್ತು. ಆದರೆ ಕೊರೊನಾ ಇದಕ್ಕೆಲ್ಲಾ ದೊಡ್ಡ ಪಾಠ ಕಲಿಸಿದೆ. ಎಲ್ಲರೂ ಎಲ್ಲಿ ವಾಸ ಮಾಡುತ್ತಾರೋ ಅಲ್ಲಿಯೇ ಇದ್ದುಕೊಂಡು ಎಲ್ಲ ಕೆಲಸ ಮಾಡುವುದು ವರ್ಚುವಲ್‍ನಿಂದ ಸಾಧ್ಯವಾಗಿದೆ. ಕೋವಿಡ್ ನಂತರ ಎಲ್ಲರೂ ತಮ್ಮ ಮೂಲ ಗ್ರಾಮಗಳಿಗೆ ಮರಳುವಂತಾಗಿದೆ. ಕಾಡು, ಗುಡ್ಡದ ಮೇಲೆ ಇರ್ರಿ ಯಾರೂ ನಗರಪ್ರದೇಶಕ್ಕೆ ಬರುವ ಅವಶ್ಯಕತೆ ಇಲ್ಲ, ನಿಮ್ಮ ತಂದೆ-ತಾಯಿ ಜೊತೆಗೆ ನಿಮ್ಮ ಊರಿನಲ್ಲಿಯೇ ಇದ್ದುಕೊಂಡು ವರ್ಚುವಲ್, ಡಿಜಿಟಲ್ ಮೂಲಕ ಎಲ್ಲ ರೀತಿಯ ವ್ಯಾಪಾರ, ವಹಿವಾಟು ಮಾಡಬಹುದು. ತಂತ್ರಜ್ಞಾನದ ಬಳಕೆ ಮಾಡಿಕೊಂಡು ಶಿಕ್ಷಣ, ವಾಣಿಜ್ಯ, ಕೈಗಾರಿಕಾ ಕ್ಷೇತ್ರದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಸರಿಯಾಗಿ ನಗರ ಜೀವನಕ್ಕಿಂತಲೂ ಇನ್ನು ಉತ್ತಮ ಗುಣಮಟ್ಟದ ಜೀವನವನ್ನು ನಾವು ವಾಸಿಸುವ ಗ್ರಾಮಗಳಲ್ಲಿಯೇ ಕಂಡುಕೊಳ್ಳಬಹುದು ಎಂದರು.

ಇದೇ ವೇಳೆ ದಕ್ಷಿಣ ಶಾಸಕ ಅಭಯ್ ಪಾಟೀಲ್ ಮಾತನಾಡಿ ಬೆಳಗಾವಿಯಲ್ಲಿ ಉದ್ಯೋಗ ಹೆಚ್ಚಿಸಿ, ಗಡಿ ನಾಡನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದಲ್ಲಿ ಸಚಿವರಾದ ಅಶ್ವತ್ಥನಾರಾಯಣ ಅವರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಅದೇ ರೀತಿ ಫೂಡ್‍ಪಾರ್ಕ ಆದಷ್ಟು ಬೇಗ ಆರಂಭವಾದರೆ ಉತ್ತರ ಕರ್ನಾಟಕ ಜನ ನಿಮ್ಮನ್ನು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಬಿ.ವ್ಹಿ.ನಾಯ್ಡು, ಡಾ.ಎಮ್.ಬಿ.ಚೆಟ್ಟಿ, ದಯಾನಂದ ನೇತಲ್ಕರ್, ಶ್ರೀಧರ ಉಪ್ಪಿನ್, ಡಾ.ವಿಷ್ಣುಪ್ರಸಾದ್ ಚೆಟಪಲ್ಲಿ, ನವೀನ್ ಲಕ್ಕೂರ ಸೇರಿದಂತೆ ಇನ್ನಿತರ ಗಣ್ಯಮಾನ್ಯರು ಉಪಸ್ಥಿತರಿದ್ದರು.

 

 

Tags:

error: Content is protected !!