ಜಿಲ್ಲೆಯ ಖ್ಯಾತ ಕವಿ, ವಿಮರ್ಶಕರಾದ ನಾಗೇಶ್ ಜೆ. ನಾಯಕ ಅವರಿಗೆ ಗದಗಿನ ಅಕ್ಷರ ದೀಪ ಫೌಂಡೇಶನ್ ಕೊಡಮಾಡುವ ರಾಷ್ಟ್ರೀಯ ಗಜಲ್ ರತ್ನ ಪ್ರಶಸ್ತಿ ಲಭಿಸಿದೆ. ನಾಗೇಶ್ ಅವರ ಸಮಾಜಮುಖಿ ಚಿಂತನೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ಉಡಿಕೇರಿಯಲ್ಲಿ ಕಳೆದ 24 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಾಗೇಶ್ ನಾಯಕ, ನಾಡಿನ ಎಲ್ಲ ಪತ್ರಿಕೆಗಳಲ್ಲೂ ಕವಿತೆ, ಕಥೆ, ಅಂಕಣ ಬರಹಗಳನ್ನು ಬರೆಯುತ್ತಿದ್ದಾರೆ. 28 ಸಂಕಲನಗಳನ್ನು ಹೊರತಂದಿರುವ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಇಂಚಲ ಕಾವ್ಯ ಪ್ರಶಸ್ತಿ, ಆಜೂರು ಪುಸ್ತಕ ಪ್ರಶಸ್ತಿ, ಅಡ್ವೈಸರ್ ಪುಸ್ತಕ ಪ್ರಶಸ್ತಿ, ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವೀರಶೈವ ಪ್ರತಿಷ್ಠಾನದ ಪ್ರಶಸ್ತಿ, ಬಾಗಲಕೋಟೆ ಗ್ರಾಮೀಣ ಸಾಹಿತ್ಯ ವೇದಿಕೆ ಬಹುಮಾನ, ಎಸ್. ಎಂ. ಕುಲಕರ್ಣಿ ಷಷ್ಠ್ಯಬ್ಧಿ ದತ್ತಿ ಪ್ರಶಸ್ತಿ, ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿ ಹಾಗೂ ನಾಡಿನ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿವೆ. ಆಕಾಶವಾಣಿಯಲ್ಲಿ ಕಥೆ, ಕವಿತೆಗಳು ಪ್ರಸಾರವಾಗಿವೆ. ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ನೇರ ಸಂದರ್ಶನ ಪ್ರಸಾರವಾಗಿದೆ. ಆಳ್ವಾಸ್ ನುಡಿಸಿರಿ ಸಮ್ಮೇಳನ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ದಲಿತ ಸಾಹಿತ್ಯ ಸಮ್ಮೇಳನ, ರನ್ನ ಉತ್ಸವ, ಕಿತ್ತೂರು ಉತ್ಸವ, ಇಟಗಿ ಉತ್ಸವ, ಹಂಪಿ ಉತ್ಸವ, ಮೈಸೂರು ದಸರಾ ಉತ್ಸವ, ಬೀದರನ ಜನಪರ ಉತ್ಸವ, ಧಾರವಾಡ, ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವಿತಾ ವಾಚನ ಮಾಡಿದ್ದಾರೆ. ಐದು ವರ್ಷಗಳಿಂದ ‘ಸಹೃದಯ ಸಾಹಿತ್ಯ ಪ್ರತಿಷ್ಠಾನ’ ಸ್ಥಾಪಿಸಿ ಪ್ರತಿ ವರ್ಷ ಒಂದು ಕವನ ಸಂಕಲನಕ್ಕೆ ಹಾಗೂ ಗಜಲ್ ಸಂಕಲನಕ್ಕೆ ‘ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ’ ಹಾಗೂ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ‘ಸಹೃದಯ ಗೌರವ ಪ್ರಶಸ್ತಿ’ಯನ್ನು ಕೂಡ ನೀಡುತ್ತಿದ್ದಾರೆ.
ದಿ. 6, ಭಾನುವಾರದಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಗಜಲ್ ಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗೇಶ್ ನಾಯಕ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಡಾ. ಶ್ರೀಶೈಲ ಮಾದಣ್ಣವರ ತಿಳಿಸಿದ್ದಾರೆ.
