ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರಿಂದ 65 ಸಾವಿರ ರೂಪಾಯಿ ಮೌಲ್ಯದ ಎರಡು ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.

ಬೆಳಗಾವಿಯ ಗುರುಪ್ರಸಾದ್ ನಗರದ ನಿವಾಸಿ ನಾಗರಾಜ ರಾಮಚಂದ್ರ ಆಚಾರಿ ಎಂಬುವರ ಹೋಂಡಾ ಡಿಯೋ ಸ್ಕೂಟರ್ ಜುಲೈ 17ರಂದು ಕಳುವಾಗಿತ್ತು. ಈ ಕುರಿತು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು, ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ವಿ ಹೊಸಪೇಟಿ ನೇತೃತ್ವದಲ್ಲಿ ವಿಶೇಷ ತನಿಖೆ ಆರಂಭಿಸಿದ್ದರು. ತನಿಖೆ ತೀವ್ರಗೊಳಿಸಿದ ಪಿಎಸ್ಐ ಯು.ಬಿ.ಕಟ್ಟಿಕರ, ಪ್ರವೀಣ ಬಿರಾದರ ಹಾಗೂ ಸಿಬ್ಬಂದಿಯ ತಂಡವು ಆರೋಪಿಗಳ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ಇಬ್ಬರು ಅಪ್ರಾಪ್ತ ಬಾಲಕರು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 25,000 ರೂ. ಮೌಲ್ಯದ ಹೋಂಡಾ ಡಿಯೋ ಹಾಗೂ 35,000 ರೂ. ಮೌಲ್ಯದ ಹೀರೋ ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 65,000 ರೂ. ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
