ಜಿಲ್ಲಾ ಕೇಂದ್ರವಾಗಲು ಸಕಲ ಅರ್ಹತೆ ಪಡೆದಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಈಗ ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ಕಣ್ಮರೆಯಾದಂತಿದೆ. ಪಟ್ಟಣದ ಪ್ರಮುಖ ರಸ್ತೆಗಳು ಬಲಿಪಶುಗಳನ್ನು ಕಾಯುವ ಸಾವಿನ ಗುಂಡಿ’ಗಳಾಗಿ ಮಾರ್ಪಟ್ಟಿದ್ದು ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿದೆ.


ಜಿಲ್ಲಾ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಚಿಕ್ಕೋಡಿ ಪಟ್ಟಣ ಇಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಕಣ್ಣೀರು ಹಾಕುತ್ತಿದೆ. ಚಿಕ್ಕೋಡಿ ಪಟ್ಟಣದ ಕೇರೂರ ಕ್ರಾಸ್ನಿಂದ ಹಾಲಟ್ಟಿ ವರೆಗಿನ ರಸ್ತೆಯಂತೂ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು, ಇಂಚಿಂಚಿಗೂ ಇರುವ ಬೃಹತ್ ತಂಗುಗುಂಡಿಗಳಲ್ಲಿ ಬಿದ್ದು ತತ್ತರಿಸಿ ಹೋಗುತ್ತಿವೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಮುಖ್ಯ ರಸ್ತೆ ಈಗ ಸಾಕ್ಷಾತ್ ‘ಸಾವಿನ ಗುಂಡಿ’ಗಳಾಗಿ ಪರಿವರ್ತನೆಯಾಗಿದೆ.
ಈ ರಸ್ತೆಯ ದುಸ್ಥಿತಿಯಿಂದಾಗಿ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ರಸ್ತೆ ದುರಸ್ತಿಗೆ ಅಧಿಕಾರಿಗಳು ಭರವಸೆ ನೀಡುತ್ತಾರೆಯೇ ವಿನಃ ಕೆಲಸ ಮಾತ್ರ ಶೂನ್ಯ! ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಗಟ್ಟಿಯಾಗುತ್ತಿದ್ದರೆ, ಇನ್ನೊಂದೆಡೆ ಸ್ವತಃ ಪಟ್ಟಣದ ಹೃದಯಭಾಗದಲ್ಲೇ ಇರುವ ರಸ್ತೆಗಳು ಸಾವಿನ ಬಲೆ ಹೆಣೆದಿವೆ. ಕೇರೂರ ಕ್ರಾಸ್ನಿಂದ ಹಾಲಟ್ಟಿವರೆಗೆ ರಸ್ತೆಯಲ್ಲ ಗುಂಡಿ ಇದೆಯೋ ಅಥವಾ ಗುಂಡಿಯಲ್ಲೇ ರಸ್ತೆ ಇದೆಯೋ ತಿಳಿಯದಂತಾಗಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ
