ನಗರದ ಶಿವಬಸವನಗರ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ೩೦೧ನೇ ಶಿವಾನುಭವ ಕಾರ್ಯಕ್ರಮವು ಸೋಮವಾರ ದಿನಾಂಕ ೬ ಜುಲೈ ೨೦೨೬ರಂದು ಸಾಯಂಕಾಲ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳವರು ವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಮೈತ್ರೇಯಣಿ ಗದಿಗೆಪ್ಪಗೌಡರ ಅವರು ʻಬಸವಾದಿ ಶರಣರು ಕಟ್ಟಿದ ಮಾನವತಾಧರ್ಮ ʼಎಂಬ ವಿಷಯ ವಿಶೇಷ ಉಪನ್ಯಾಸ ನೀಡುವರು.
ಇದೇ ಸಂದರ್ಭದಲ್ಲಿ ಸಂಗೀತಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಡಾ. ಸುನೀತಾ ಪಾಟೀಲ, ಡಾ ದುರ್ಗಾ ನಾಡಕರಣಿ, ಸುಜಾತಾ ಕನ್ನೇಶ್, ನೈನಾ ಗಿರಿಗೌಡರ, ಸಹನಾ ಬೋಗಾರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಗುವುದು.
ಶ್ರೀ ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳಿಂದ ಪ್ರಾರ್ಥನೆ ಜರುಗುವುದು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
