ತಾಯಿ ಮಗ ಬೈಕ್ ಮೇಲೆ ಬರುತ್ತಿದ್ದ ವೇಳೆ ಬೀದಿ ನಾಯಿ ಅಡ್ಡ ಬಂದು ನಾಯಿ ಉಳಿಸಲು ಹೋಗಿ ಬೈಕ್ ಬ್ರೇಕ್ ಹಾಕಿದ ಕೂಡಲೇ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.
ಪಂತಬಾಳೇಕುಂದ್ರಿಯಿಂದ ಮಹಾಂತೇಶ ನಗರಕ್ಕೆ ಬೈಕ್ನಲ್ಲಿ ಬರುತ್ತಿದ್ದ ಮಹಾಂತೇಶ ಕಲ್ಮಠ ತಮ್ಮ ತಾಯಿ ಶಾಂತವ್ವ ಕಲ್ಮಠ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮನೆ ಕಡೆ ಹೊರಟಿದ್ದರು. ಸಾಂಬ್ರಾ ಗ್ರಾಮದ ಸಮೀಪಕ್ಕೆ ಬಂದಾಗ ಏಕಾಏಕಿ ಬೀದಿ ನಾಯಿ ಬೈಕ್ ಮುಂದೆ ಅಡ್ಡ ಬಂದಿದೆ. ಪ್ರಾಣಿಯ ಜೀವ ಉಳಿಸಬೇಕೆಂಬ ಮಾನವೀಯ ಮನಸ್ಸಿನಿಂದ ಮಹಾಂತೇಶ ತಕ್ಷಣ ಬೈಕ್ಗೆ ಬ್ರೇಕ್ ಹಾಕಿದ್ದಾರೆ. ಆದರೆ ಬ್ರೇಕ್ ಹಾಕಿದ ಹೊಡೆತಕ್ಕೆ ಹಿಂಬದಿಯಲ್ಲಿ ಕುಳಿತಿದ್ದ ಶಾಂತವ್ವ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಷಣಕಾಲದ ಹಿಂದೆ ಮಗನೊಂದಿಗೆ ಮಾತನಾಡುತ್ತಾ ಬರುತ್ತಿದ್ದ ತಾಯಿ, ಮುಂದಿನ ಕ್ಷಣವೇ ಜೀವ ಕಳೆದುಕೊಂಡಿದ್ದು ಕುಟುಂಬದವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

