Belagavi

ಎಮಿನೆಂಟ್‌ ಕೋಚಿಂಗ್‌ ಕೇಂದ್ರದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಸ್ತಿ ಪ್ರದಾನ

Share

ಬೆಳಗಾವಿ: ಮಕ್ಕಳ ಜ್ಞಾನಾರ್ಜನೆಯ ವೃದ್ಧಿಗೆ ಬೆಳಗಾವಿಗೆ ಒಂದು ಉತ್ತಮವಾದ ಕೋಚಿಂಗ್‌ ಅಗತ್ಯತೆ ಇತ್ತು. ಅದನ್ನು ಎಮಿನಂಟ್‌ ಕೋಚಿಂಗ್‌ ಕೇಂದ್ರದವರು ಪೂರ್ಣ ಮಾಡಿದ್ದಾರೆಂಬ ತೃಪ್ತಿ ಇದೆ. ಜತೆಗೆ ಇಲ್ಲಿ ಶಿಕ್ಷಣ ಪಡೆದಿರುವ ಮಕ್ಕಳು ಇನ್ನಷ್ಟು ಎತ್ತರಕೆ ಬೆಳೆಯಲಿ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಮೇಯರ್‌ ಪ್ರೀತಿ ಕಾಮಕರ ಹೇಳಿದರು.
ನಗರದಲ್ಲಿ ಖಾಸಗಿ ಮಾಲ್‌ನಲ್ಲಿ ಎಮಿನೆಂಟ್‌ ಕೋಚಿಂಗ್‌ ಕ್ಲಾಸಿಕ್‌ ವತಿಯಿಂದ ಬುಧವಾರ ನಡೆದ ಬೇಸಿಗೆ ತರಬೇತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಿವಿಧ ಸ್ಪರ್ಧಾತ್ಮಕ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಏಳಿಗೆಗೆ ಶಿಕ್ಷಕರು ಹೇಗೆ ಕಾರಣರೋ ಪೋಷಕರು ಪಾತ್ರ ಕೂಡ ಅಷ್ಟೇ ಇದೆ. ಎಲ್ಲವನ್ನು ಶಿಕ್ಷಕರ ಮೇಲೆಯೇ ಜವಾಬ್ದಾರಿ ಹಾಕಬಾರದು. ತಮ್ಮ ಜವಾಬ್ದಾರಿ ಏನೆಂಬುವುದನ್ನು ಪೋಷಕರು ಅರಿತುಕೊಳ್ಳಬೇಕು. ಬೆಳಗಾವಿಯಲ್ಲಿ ಎಮಿನೆಂಟ್‌ ಕೋಚಿಂಗ್‌ ಕೇಂದ್ರ ಅದ್ಭುತವಾದ ಕೆಲಸ ಮಾಡುತ್ತಿದೆ. ಇದಕ್ಕೆ ಮಂಜುನಾಥ ಕೌಲಗಿ ಅವರು ಅಭಿನಂದನಾರ್ಹರು ಎಂದು ಅವರು ಶ್ಲಾಘಿಸಿದರು.
ಉಪ ಮಹಾಪೌರ ಹನಮಂತ ಕೊಂಗಾಲಿ ಮಾತನಾಡಿ, ಹಳೆಯ ಕಾಲದಲ್ಲಿ ಶಾಲೆಗಳೇ ಇರುತ್ತಿರಲಿಲ್ಲ. ದೇವಸ್ಥಾನಗಳೇ ಶಾಲೆಯಾಗಿರುತ್ತಿದ್ದವು. ಶಾಲೆಗಳಿದ್ದರೂ ಸರಿಯಾದ ಕೊಠಡಿಗಳು ಇರುತ್ತಿರಲಿಲ್ಲ. ಸರಿಯಾದ ರಸ್ತೆ, ವಾಹನಗಳ ಸೌಕರ್ಯ ಕೂಡ ಇರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿಯೂ ಸಾಧನೆ ಮಾಡಿದವರು ಇದ್ದರು. ಆದರೆ, ಈಗ ಕಾಲಮಾನ ಬದಲಾಗಿದೆ. ಶಿಕ್ಷಣ ಪಡೆಯಲು ಎಲ್ಲ ಮೂಲಭೂತ ಸೌಲಭ್ಯಗಳಿದ್ದರೂ ಮಕ್ಕಳಿಗೆ ಅದನ್ನು ಪಡೆಯಬೇಕೆಂಬ ಹಂಬಲ ಮೊಬೈಲ್ ದುನಿಯಾದಲ್ಲಿ ಕಡಿಮೆಯಾಗುತ್ತಿದೆ. ಆದರೆ, ಇಲ್ಲಿ ಮಕ್ಕಳು ಉತ್ತಮ ಸಾಧನೆಯನ್ನು ನೋಡಿದರೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಉತ್ಕೃಷ್ಟಮಟ್ಟದ್ದಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.


ಬಿಜೆಪಿ ಮುಖಂಡ ಮುರಘೇಂದ್ರಗೌಡ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ಆರಂಭಗೊಂಡಿರುವ ಎಮಿನೆಂಟ್‌ ಕೋಚಿಂಗ್‌ ಸೆಂಟರ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದಕ್ಕೆ ಇಲ್ಲಿನ ಫಲಿತಾಂಶವೇ ಕೈಗನ್ನಡಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸತತ ಪರಿಶ್ರಮ ಪಡಬೇಕು. ಶ್ರಮವಿಲ್ಲದೆ ಯಾವುದೂ ದಕ್ಕುವುದಿಲ್ಲ ಎಂದ ಅವರು, ಮಕ್ಕಳ ಜ್ಞಾನಮಟ್ಟ ಸುಧಾರಣೆಗೆ ಇಂತಹ ಕೋಚಿಂಗ್‌ ಕೇಂದ್ರಗಳ ಅಗತ್ಯತೆ ಇದೆ ಎಂದು ಅವರು ಹೇಳಿದರು.
ನಿವೃತ್ತ ವಾಯುಸೇನೆ ಅಧಿಕಾರಿ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಬಿ. ವಣ್ಣೂರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯವಾಗಿದೆ. ಇದರ ಜೊತೆಗೆ ಅವರ ಪರಿಶ್ರಮ ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಲಿಟಲ್‌ ಸ್ಕಾಲರ್ಸ್‌ ಅಕಾಡೆಮಿಯ ಪ್ರಾಚಾರ್ಯರಾದ ಶೀಬಾ ಎಸ್‌. ನಾಗಲ್ಲಾ ಮಾತನಾಡಿ, ಮಕ್ಕಳು ಇಂದಿನ ದಿನಮಾನಗಳಲ್ಲಿ ಮೊಬೈಲ್‌ಗಳಿಗೆ ಹೆಚ್ಚು ಹೊಂದುಕೊಳ್ಳುವ ಸ್ವಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ, ಪೋಷಕರು ಇಂತಹ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬಾರದು. ಅವರಲ್ಲಿ ಓದುವ ಮತ್ತು ಹೆಚ್ಚು ಜ್ಞಾನಾರ್ಜನೆ ಆಗುವ ಕಾರ್ಯಗಳನ್ನು ಕಲಿಸಿಕೊಡಬೇಕು. ಶಾಲೆಗಳಲ್ಲಿ ಶಿಕ್ಷಕರ ತೆಗೆದುಕೊಳ್ಳುವ ಜವಾಬ್ದಾರಿಗಿಂತ ಪೋಷಕರು ತಮ್ಮ ಮಕ್ಕಳ ಹೊಣೆಗಾರಿಕೆ ಹೊರಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಜೀವನದಲ್ಲಿ ಉತ್ತಮ ಭವಿಷ್ಯ ಹೊಂದಬೇಕಾದರೆ ಸತತ ಪರಿಶ್ರಮ, ಆಸಕ್ತಿಯಿಂದ ಓದುವುದು ಮತ್ತು ಗುರಿ ಇಟ್ಟುಕೊಂಡು ಮುಂದೆ ಹೋಗುವುದನ್ನು ರೂಢಿಸಿಕೊಳ್ಳಬೇಕು. ಕೇವಲ ಪಠ್ಯದಿಂದ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಆಗುವುದಿಲ್ಲ. ಬದಲಾಗಿ ವಿದ್ಯಾರ್ಥಿ ಜೀವನದಲ್ಲಿ ಕಲಿತ ಉತ್ತಮ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ಬ್ಯುರೋ ಮುಖ್ಯಸ್ಥ ಬ್ರಹ್ಮಾನಂದ ಹಡಗಲಿ ಮಾತನಾಡಿ, ಜ್ಞಾನ ನಮ್ಮಿಂದ ಯಾರೂ ಕದಿಯದ ವಸ್ತು. ಜೀವನದಲ್ಲಿ ಎಂತಹ ಸಂಕಷ್ಟಗಳೇ ಬಂದರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀಡುವುದೇ ಈ ಶಿಕ್ಷಣ. ಹಣ ಇದ್ದರೆ ಖಾಲಿಯಾಗುತ್ತದೆ. ಜ್ಞಾನವಿದ್ದರೆ ಅದು ಎಂದಿಗೂ ಖಾಲಿಯಾಗದ ಖಜಾನೆ ಎಂದು ಕಥೆಯ ರೂಪದಲ್ಲಿ ನಿರೂಪಿಸಿ, ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಎಮಿನೆಂಟ್‌ ಕೋಚಿಂಗ್‌ ಕೇಂದ್ರದ ಸಂಸ್ಥಾಪಕ ಮಂಜುನಾಥ ಜಿ. ಕೌಲಗಿ ಮಾತನಾಡಿ, ಮಕ್ಕಳ ಮನಸು ನಾವು ಹೇಗೆ ತಿದ್ದುತ್ತೇವೆ ಹಾಗಾಗುತ್ತದೆ. ಅವರಲ್ಲಿ ಸಾಧಿಸುವ ಗೌಪ್ಯ ಶಕ್ತಿ, ಸಾಮರ್ಥ್ಯ ಇರುತ್ತದೆ. ಆದರೆ, ಅದು ಅವರಿಗೆ ತಿಳಿದಿರುವುದಿಲ್ಲ. ಆ ಗುಪ್ತ ಶಕ್ತಿಯನ್ನು ನಾವು ಬಡಿದೆಬ್ಬಿಸಿದಾಗ ಮಕ್ಕಳಲ್ಲಿ ಸಾಧನೆ ಎಂಬುವುದು ಹೊರಸೂಸುತ್ತದೆ ಎಂದು ಉದಾಹರಣೆಸಹಿತ ವಿವರಿಸಿದರು.
ಎಮಿನೆಂಟ್‌ ಕೋಚಿಂಗ್‌ ಕೇಂದ್ರದ ಕುರಿತಾಗಿ ಎಲ್ಲರೂ ಹಲವಾರು ಶುಭಾಶಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಮುಂದಿನ ದಿನಗಳಲ್ಲಿ ಶೈಕ್ಷಣಿಕ ರಂಗದಲ್ಲಿ ಮತ್ತಷ್ಟು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇವೆ. ಜತೆಗೆ ನರ್ಸರಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿವರೆಗೆ ಶಾಲೆಯನ್ನು ತೆರೆದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಮೇಟಿ, ರಾಯಬಾಗ ಬಿಇಒ ಕಚೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಸುಲೇಮಾನ ಎಂ. ಶೇಖ, ವಿಕಾಸ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶ ಭಾಗ್ಯಲಕ್ಷ್ಮಿ ಎಂ. ಕೌಲಗಿ, ಆಡಳಿತಾಧಿಕಾರಿ ಸದಾನಂದ ಬಡ್ಡೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಒಕ್ಕುಂದ,
ವಿಕಾಸ ಸಂಸ್ಥೆ ಗೌರವ ಅಧ್ಯಕ್ಷರು ಸೋಮಶೇಖರ ಸುಲಿಗಾವಿ, ವಿಕಾಸ ಸಂಸ್ಥೆ ಉಪಾಧ್ಯಕ್ಷರು ಗುರುಸಿದ್ದಪ್ಪ ಕೌಲಗಿ, ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಚನ್ನಬಸಪ್ಪ ಪಡಗಾನೂರ, ಸಂಸ್ಥೆಯ ನಿರ್ದೇಶಕ ಸೋಮಶೇಖರ ಪಡಗಾನೂರ ಇದ್ದರು. ಅಕ್ಷತಾ ಮಹಾಜನ್‌ ನಿರೂಪಿಸಿದರು. ವಾಣಿಶ್ರೀ ದೇವೂರ ಸ್ವಾಗತಿಸಿದರು. ಸುಮಾ ಗಂಗಯ್ಯನಕೊಪ್ಪ ವಂದಿಸಿದರು. ಇದಕ್ಕೂ ಮೊದಲು ಸದಾಶಿವ ಸೋರಗಾಂವಿ ಪ್ರಾಸ್ತಾವಿಕವಾಗ ಮಾತನಾಡಿದರು. ಚನ್ನವೀರಯ್ಯ ಪುರಾಣಿಕಮಠ ಹಾಗೂ ಗಿರೀಶ ತೋಡ್ಕರ್‌ ಬಹುಮಾನ ಕಾರ್ಯಕ್ರಮ ನೆರವೇರಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಕಳೆದ ಬಾರಿಯ ಕೋಚಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಶುಭ ಕೋರಿದರು. ಇದೆ ವೇಳೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಹಲವಾರು ಪೋಷಕರು ತಮ್ಮ ಅಭಿಪ್ರಾಯ ಹಂಚಿಕೊಂಡರು

Tags:

error: Content is protected !!