ನಾರಿಶಕ್ತಿ ವಂದನ್ ಮಸೂದೆಗೆ ಹರ್ಷ

ಮೋದಿ ಸರ್ಕಾರದ ಐತಿಹಾಸಿಕ ತೀರ್ಮಾನ
ರಾಜಕೀಯವಾಗಿ ಮಹಿಳೆಯರು ಇನ್ಮುಂದೆ ಸಬಲ
ಪ್ರಜಾಪ್ರಭುತ್ವಕ್ಕೆ ಬಂದಿದೆ ಆನೆ ಬಲ
ಚಿಕ್ಕೋಡಿ: ಲೋಕಸಭೆ ಹಾಗೂ
ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ತರಲು ನಾರಿಶಕ್ತಿ ವಂದನ್ ಮಸೂದೆ ಜಾರಿಗೊಳಿಸುತ್ತಿರುವುದು ಮೋದಿ ಸರ್ಕಾರದ ದಿಟ್ಟ ನಿರ್ಧಾರವಾಗಿದೆ. ಈ ಕಾಯ್ದೆಯಿಂದ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಂಭವಿ ಅಶ್ವತ್ಥಪೂರ ಹೇಳಿದರು.
ಚಿಕ್ಕೋಡಿ ಪಟ್ಟಣದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮೀಸಲು ಕಾಯ್ದೆ ದೇಶದ ಮಹಿಳೆಯರ ದೀರ್ಘಕಾಲದ ಹೋರಾಟದ ಫಲವಾಗಿದೆ. ಇಲ್ಲಿಯವರೆಗೆ ಆಡಳಿತ ನಡೆಸಿದ ಯಾವ ಪಕ್ಷಗಳು ಮಸೂದೆ ಜಾರಿಗೆ ಮನಸ್ಸು ಮಾಡಿರಲಿಲ್ಲ. ಪ್ರದಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ ಎಂದರು.
ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಅನುಕೂಲತೆ ಮಾಡಿದೆ. ಮಹಿಳೆಯರಿಗಾಗಿ ಶೌಚಾಲಯ, ಮನೆ, ಅಡುಗೆ ಅನಿಲ ಮುಂತಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದು, ಇದೀಗ ನಾರಿಶಕ್ತಿ ವಂದನ್ ಮೂಲಕ ಮಹಿಳೆಯರು ರಾಜಕೀಯದಲ್ಲಿ ಬಲಿಷ್ಠತೆ ಸಾಧಿಸಲು ಸಾಧ್ಯವಾಗಲಿದೆ ಎಂದರು.
ಈ ವೇಳೆ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಡೋಣವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಉಪಸ್ಥಿತರಿದ್ದರು.
