BELAGAVI

ಬೆಳಗಾವಿಯಲ್ಲಿ 107ನೇ ವರ್ಷದ ಶಿವಜಯಂತಿ ಸಂಭ್ರಮ: ಏಪ್ರಿಲ್ 21ಕ್ಕೆ ಭವ್ಯ ರೂಪಕಗಳ ಮೆರವಣಿಗೆ!

Share

ಬೆಳಗಾವಿಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಶಿವಜಯಂತಿ ಉತ್ಸವದ ಪೂರ್ವಸಿದ್ಧತೆಗಾಗಿ ಶಹಾಪುರ ಕೇಂದ್ರವರ್ತಿ ಶ್ರೀ ಶಿವಜಯಂತಿ ಉತ್ಸವ ಮಹಾಮಂಡಳದ ಮಹತ್ವದ ಸಭೆ ಜರುಗಿತು. 107 ವರ್ಷಗಳ ಇತಿಹಾಸವಿರುವ ಈ ಬಾರಿಯ ಉತ್ಸವದಲ್ಲಿ ಏಪ್ರಿಲ್ 19 ರಂದು ಶಿವಜಯಂತಿ ಹಾಗೂ ಏಪ್ರಿಲ್ 21 ರಂದು ಭವ್ಯ ರೂಪಕಗಳ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಶಹಾಪುರದ ಸಾಯಿಗಣೇಶ ಸೊಸೈಟಿ ಸಭಾಂಗಣದಲ್ಲಿ ಅಧ್ಯಕ್ಷ ನೇತಾಜಿ ಜಾಧವ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಬೆಳಗಾವಿ ಶಿವಜಯಂತಿಗೆ ತನ್ನದೇ ಆದ ವಿಶಿಷ್ಟ ಇತಿಹಾಸವಿದ್ದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಏಪ್ರಿಲ್ 19ರಂದು ಬೆಳಿಗ್ಗೆ ಶಹಾಪುರದ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ ಪೂಜೆ ನೆರವೇರಲಿದ್ದು, ಏಪ್ರಿಲ್ 21ರಂದು ಸಂಜೆ ನಾಥ ಪೈ ಚೌಕ್‌ನಲ್ಲಿ ವಿವಿಧ ಕಲಾತಂಡಗಳನ್ನೊಳಗೊಂಡ ರೂಪಕಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಶಹಾಪುರ, ಅನಗೋಳ ಹಾಗೂ ವಡಗಾವಿ ಭಾಗದಿಂದ ಬರುವ ರೂಪಕಗಳಿಗೆ ಮಹಾಮಂಡಳದಿಂದ ಅದ್ದೂರಿ ಸ್ವಾಗತ ಕೋರಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಮರಗಾಳೆ ಹಾಗೂ ಕೇಂದ್ರವರ್ತಿ ಶಿವಜಯಂತಿ ಮಂಡಳಿಯ ಅಧ್ಯಕ್ಷ ಅಂಕುಶ್ ಕೇಸರ್ಕರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಮರಗಾಳೆ, ಗಡಿ ಸಮಸ್ಯೆಯ ಕುರಿತು ಶಿವಜಯಂತಿಯ ನಂತರ ಮುಂದಿನ ಹೋರಾಟದ ಹಾದಿ ನಿರ್ಧರಿಸಲಾಗುವುದು ಎಂದರು. ಅಂಕುಶ್ ಕೇಸರ್ಕರ್ ಮಾತನಾಡಿ, 107 ವರ್ಷಗಳ ಈ ಭವ್ಯ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಲು ಎಲ್ಲರ ಸಹಕಾರ ಕೋರಿದರು. ಸಭೆಯಲ್ಲಿ ಮಾಜಿ ಉಪಮೇಯರ್ ಸಂಜಯ್ ಶಿಂದೆ, ರಾಜು ಬಿರ್ಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!