ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ರೈತರ ಬಾಕಿ ಹಣವನ್ನು ಪಾವತಿಸದೆ ಇರುವುದನ್ನು ಖಂಡಿಸಿ, ಬಡ್ಡಿ ಸಮೇತ ತಕ್ಷಣ ಪಾವತಿಸಬೇಕೆಂದು ಆಗ್ರಹಿಸಿ ಶನಿವಾರ ಭಾರತೀಯ ಕೃಷಿಕ ಸಮಾಜದ ವತಿಯಿಂದ ರೈತರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು, ಕಬ್ಬು ಸರಬರಾಜು ಮಾಡಿದ ನಂತರ 15 ದಿನಗಳೊಳಗೆ ಬಿಲ್ ಪಾವತಿಸಬೇಕು ಎಂಬ ನಿಯಮ ಇದ್ದರೂ, ಅನೇಕ ಕಾರ್ಖಾನೆಗಳು ಇದನ್ನು ಪಾಲಿಸದೆ ರೈತರ ಬಾಕಿ ಹಣವನ್ನು ತಿಂಗಳಗಟ್ಟಲೆ ಉಳಿಸಿಕೊಂಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರ ನಿಗದಿತ ಪಡಿಸಿದ ದರವನ್ನು ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಳೆಗಾರರಿಗೆ ನೀಡಬೇಕು. ಆದರೇ, ಲಕ್ಷಾಂತರ ಟನ್ ಕಬ್ಬು ತೆಗೆದುಕೊಂಡ ಸಕ್ಕರೆ ಕಾರ್ಖಾನೆಯ ಮಾಲೀಕರು ಅರ್ಧ ಬೆಲೆಯನ್ನು ಮಾತ್ರ ಪಾವತಿಸುತ್ತಿದ್ದಾರೆ. ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲು ಸುಮಾರು 50 ಸಾವಿರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೇ, ಇದಕ್ಕೆ ತಕ್ಕಂತೆ ಸಕ್ಕರೆ ಕಾರ್ಖಾನೆಗಳು ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು 3500 ಕೋಟಿ ರೂಪಾಯಿ ಸಕ್ಕರೆ ಬಿಲ್ ಬಾಕಿಯಿದ್ದು, ನಮಗೆ ಯಾರ ಎಂಜಲ ಕಾಸು ಬೇಕಿಲ್ಲ. ನಮ್ಮ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿ. ಇಲ್ಲದಿದ್ದರೇ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮುದಕಣ್ಣ ಕಂಕೊಳ್ಳಿ ಅವರು ಎಚ್ಚರಿಕೆಯನ್ನು ನೀಡಿದರು.
ಸಕ್ಕರೆ ಕಾರ್ಖಾನೆಗಳು ಸುಮಾರು 3500 ಕೋಟಿ ರೂಪಾಯಿ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. 12 ತಿಂಗಳು ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ 4 ತಿಂಗಳಾದರೂ ಹಣ ನೀಡದ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ಇದೇ ನೀತಿ ಮುಂದುವರೆದರೇ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮತ್ತು ಸಕ್ಕರೆ ಆಯುಕ್ತರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದೆಂದು ನವದೆಹಲಿಯ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಹಾಂತೇಶ್ ಕಮತ್ ಹೇಳಿದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ರೈತರು ಇನ್ನುಳಿದವರು ಭಾಗಿಯಾಗಿದ್ಧರು.
