ಬೆಳಗಾವಿಯ ಶಾಹೂ ನಗರದ ವಿನಾಯಕ ಕಾಲನಿಯಲ್ಲಿ ಹನುಮ ಜಯಂತಿಯನ್ನು ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಯಿತು. ಮಾಜಿ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಉಪಮಹಾಪೌರರಾದ ರೇಷ್ಮಾ ಪ್ರವೀಣ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾರುತಿಯ ದರ್ಶನ ಪಡೆದರು.
ಬೆಳಗಾವಿಯ ಶಾಹೂ ನಗರದ ವಿನಾಯಕ ಕಾಲನಿಯಲ್ಲಿ ಹನುಮ ಜಯಂತಿಯ ಅಂಗವಾಗಿ ಆಂಜನೇಯ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾ ಆರತಿಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸುಮಂಗಲಿಯರು ಬಾಲ ಹನುಮನನ್ನು ತೊಟ್ಟಿಲಿಗೆ ಹಾಕಿ ಜೋಗುಳ ಹಾಡುವ ಮೂಲಕ ಸಂಪ್ರದಾಯಬದ್ಧವಾಗಿ ಜನ್ಮೋತ್ಸವವನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅನಿಲ್ ಬೆನಕೆ, ಮಾಜಿ ಉಪಮಹಾಪೌರರಾದ ರೇಷ್ಮಾ ಪ್ರವೀಣ್ ಪಾಟೀಲ್ ಹಾಗೂ ನಗರಸೇವಕ ನಾಕಾಡೆ ಅವರು ಆಗಮಿಸಿ ಪೂಜೆ ಸಲ್ಲಿಸಿದರು.

ದೇವಸ್ಥಾನದ ಟ್ರಸ್ಟ್ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಧಾರ್ಮಿಕ ವಿಧಿವಿಧಾನಗಳ ನಂತರ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವಿನಾಯಕ ಕಾಲನಿಯ ನಿವಾಸಿಗಳು ಮತ್ತು ಸುತ್ತಮುತ್ತಲಿನ ಭಕ್ತ ಸಾಗರವು ಶ್ರದ್ಧಾಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮಂತನ ಕೃಪೆಗೆ ಪಾತ್ರರಾದರು
