ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ನಿರ್ಣಯಗಳನ್ನು ಅಂಗೀಕರಿಸಬೇಕೆಂಬ ಬೇಡಿಕೆಯನ್ನೊಳಗೊಂಡು ಕನ್ನಡ ಸಂಘಟನೆಗಳ ವಿವಿಧ ಹಕ್ಕೊತ್ತಾಯ ಸಂಬಂಧ ಹೋರಾಟವನ್ನು ಮುಂದುವರೆಸಲು ಹಾಗೂ ಏಪ್ರಿಲ್ 2ನೇ ವಾರ ಮುಖ್ಯಮಂತ್ರಿಗಳ, ಗಡಿ ಉಸ್ತವಾರಿ ಸಚಿವರ ಹಾಗೂ ರಾಜ್ಯದ ಮುಖ್ಯಕಾರ್ಯದರ್ಶಿಗಳ ಭೇಟಿಗಾಗಿ 12 ಕನ್ನಡ ಸಂಘಟನೆಗಳ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ಯಲು ಸೋಮವಾರ ಮುಂಜಾನೆ ನಡೆದ ಕನ್ನಡ ಸಂಘಟನೆಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿಯವರ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಕೊಳ್ಳಲಾಗಿದೆ. ಬೆಳಗಾವಿ ಪಾಟಿಕೆಯಲ್ಲಿ ಕರ್ನಾಟಕ ಪರವಾದ ನಿರ್ಣಯಗಳನ್ನು ಅಂಗೀಕರಿಸುವ ಸಂಬಂಧ ಉಪ ಮಹಾಪೌರರಾದ ಹಣಮಂತ ಕೊಂಗಾಲಿಯವರು ಕನ್ನಡ ಹೋರಾಟಗಾರರಾದ ಬಲರಾಮ ಮಾನೇನಟ್ಟಿಯವರಿಗೆ ನೀಡಿದ ಭರವಸೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಕನ್ನಡ ಸಂಘಟನೆಗಳ ಮುಖಂಡರು. ನಿರ್ಣಯಗಳ ಬಗ್ಗೆ ಚರ್ಚಿಸಲು ಯಾರೇ ಆಹ್ವಾನ ನೀಡಿದರೂ ಚರ್ಚೆಗೆ ಸಿದ್ಧವಿರುವದಾಗಿ ತಿಳಿಸಿದರು.
“ಗಡಿವಿವಾದ ಸಂಬಂಧ ಮಹಾಜನ ವರದಿಯೇ ಅಂತಿಮ ಹಾಗೂ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯಗಳನ್ನು ಪಾಲಿಕೆಯಲ್ಲಿ ಅಂಗೀಕರಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಕನ್ನಡ ಪರ ಸಂಘಟನೆಗಳು ಪ್ರತ್ಯೇಕವಾಗಿ ಮಂಗಳವಾರದಿಂದಲೇ ಮಹಾಪೌರರಿಗೆ ಹಾಗೂ ಉಪ ಮಹಾಪೌರರಿಗೆ ಮನವಿ
ಅರ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದ್ದ 50 ಲಕ್ಷ ರೂ.ಗಳ ಅನುದಾನದ ದುರ್ಬಳಕೆ ಬಗ್ಗೆ ಈಗಾಗಲೇ 12 ಕನ್ನಡ ಸಂಘಟನೆಗಳು ಮುಖ್ಯಮಂತ್ರಿಗಳಿಗೆ, ಗಡಿ ಉಸ್ತುವಾರಿ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ, ಪ್ರವಾಸೋದ್ಯಮ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ತಮಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಬಲರಾಮ ಮಾನೇನಟ್ಟಿಯವರು ಸಭೆಗೆ ವಿವರಿಸಿದರು. ಈ ಸಂಬಂಧ ಬೆಂಗಳೂರಿಗೆ ತೆರಳರುವ ನಿಯೋಗದ ಸಂದರ್ಭದಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗುವದೆಂದು ಅಶೋಕ ಚಂದರಗಿ ತಿಳಿಸಿದರು.
ರಾಜ್ಯ ಸರಕಾರ ನೀಡಿದ 7 ಕೋಟಿ.ರೂ.ಗಳ ಅನುದಾನದಲ್ಲಿ ಬೆಳಗಾವಿಯಲ್ಲಿ ನಿರ್ಮಿಸಲಾದ ಕನ್ನಡ ಭವನವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆಯ ಬಗ್ಗೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿದ್ದು ಮುಂದಿನ ದಿನಗಳಲ್ಲಿ ಕನ್ನಡ ಸಂಘಟನೆಗಳ ಬೇಡಿಕೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ 2024 ರ ರಾಜ್ಯೋತ್ಸವ ದಿನದಂದು ಪ್ರತಿಷ್ಠಾಪಿಸಲಾಗಿದ್ದ ಹಲ್ಮಡಿ ಶಾಸನದ ಪ್ರತಿಕೃತಿಯು ನಾಪತ್ತೆಯಾಗಿದ್ದು ಇದನ್ನು ಒಂದು ವಾರದಳೊಗೆ ಮರು ಸ್ಥಾಪನೆ ಮಾಡಲು ನೀಡಲಾಗಿದ್ದ ಗಡುವನ್ನು ಇನ್ನೊಂದು ವಾರ ಕಾಲ ವಿಸ್ತರಿಸಲು ಸಭೆಯು ನಿರ್ಧರಿಸಿತು.
ಸಭೆಯಲ್ಲಿ ಕಿತ್ತೂರು ಕನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹಿರೇಕೋಡಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕನ್ನಡ ಹೋರಾಟಗಾರರಾದ ಬಾಳಪ್ಪ ಗುಡಗೇನಟ್ಟಿ, ಸಣ್ಣತಮ್ಮಾ ಮೂಕನವರ, ನಾಗೇಶ ಕೊಪ್ಪದ, ಮಲ್ಲಪ್ಪಾ ಗುಡಗೇನಟ್ಟಿ, ದಯಾನಂದ ಪವಾರ, ಈಶ್ವರಗೌಡ ಪಾಟೀಲ, ಸತೀಶ ನಾಯಕ ಫರಿದಾ ನಧಾಪ, ರಾಣಿ ಬೀಟಿ, ಸಂಗೀತಾ ಕಾಂಬಳೆ ಹಾಗೂ ಅರವಿಂದ ಸಿಂಗ್ ನೇರ ಸಭೆಯಲ್ಲಿ ಪಾಲ್ಗೊಂಡಿದ್ದರು.
