ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಕಣ ರಂಗೇರಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ದೈವದ ಮೊರೆ ಹೋಗಿದ್ದಾರೆ. ಗೋ ಪೂಜೆ ಹಾಗೂ ತಂದೆಯ ಸಮಾಧಿಗೆ ನಮನ ಸಲ್ಲಿಸುವ ಮೂಲಕ ತಮ್ಮ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು ಚುನಾವಣಾ ಅಖಾಡಕ್ಕೆ ಅದ್ಧೂರಿಯಾಗಿ ಪ್ರವೇಶಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ತಿಮ್ಮಾಪೂರ ಗ್ರಾಮದಲ್ಲಿರುವ ತಮ್ಮ ತಂದೆ, ದಿವಂಗತ ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಭಕ್ತಿಯಿಂದ ಗೋ ಪೂಜೆ ನೆರವೇರಿಸಿದ ಅವರು, ತಂದೆಯ ಆಶೀರ್ವಾದ ಪಡೆದು ವಿಜಯದ ವಿಶ್ವಾಸದೊಂದಿಗೆ ರಾಜಕೀಯ ಹಾದಿ ತುಳಿದಿದ್ದಾರೆ.
ಸಮಾಧಿ ಪೂಜೆಯ ನಂತರ ಬಾಗಲಕೋಟೆಯ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಉಮೇಶ್ ಮೇಟಿ ಅವರು ಅಧಿಕೃತವಾಗಿ ‘ಬಿ-ಫಾರ್ಮ್’ ಸ್ವೀಕರಿಸಿದರು. ಬೀಳಗಿ ಶಾಸಕ ಜೆ.ಟಿ. ಪಾಟೀಲ್ ಹಾಗೂ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಬಿ-ಫಾರ್ಮ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಮೇಶ್ ಅವರ ಸಹೋದರಿ ಬಾಯಕ್ಕ ಮೇಟಿ ಜೊತೆಗಿದ್ದು ಬೆಂಬಲ ಸೂಚಿಸಿದರು. ಬಿ-ಫಾರ್ಮ್ ಕೈಸೇರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮನೆಮಾಡಿದ್ದು, ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
