ಗೋಕಾಕ್ ರಸ್ತೆಯಲ್ಲಿ ಮೃತ್ಯುರೂಪಿ ಟಿಪ್ಪರ್ ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಸ್ಥಳದಲ್ಲೇ ದುರ್ಮರಣ ಹೊಂದಿದ ಭೀಕರ ಘಟನೆ ಸಂಭವಿಸಿದೆ.
ಇಟ್ನಾಳ-ಸತ್ತಿಗೇರಿ ರಸ್ತೆಯ ಮುಗಳಿಹಾಳ ಕ್ರಾಸ್ ಬಳಿ ಶನಿವಾರ ಈ ದುರ್ಘಟನೆ ನಡೆದಿದೆ. ಕೌಜಲಗಿ ಗ್ರಾಮದ ನಿವಾಸಿ ಉಮೇಶ ಭಜಂತ್ರಿ (29) ಮೃತಪಟ್ಟ ದುರ್ದೈವಿ. ಉಮೇಶ್ ರಸ್ತೆಯ ಪಕ್ಕದಲ್ಲಿ ಸತ್ತಿಗೇರಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ನಾಗಪ್ಪ ಹಂಜಿ ಎಂಬಾತ ಚಲಾಯಿಸುತ್ತಿದ್ದ ಭಾರತ ಬೆಂಜ್ ಟಿಪ್ಪರ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಟಿಪ್ಪರ್ನ ವೇಗ ಎಷ್ಟಿತ್ತೆಂದರೆ, ಉಮೇಶ್ ಚೇತರಿಸಿಕೊಳ್ಳುವ ಮೊದಲೇ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ನೇರ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಮುರಗೋಡ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
