ಅಹಂಕಾರದ ಅಜ್ಞಾನದಿಂದ ಮನುಷ್ಯ ತನ್ನನ್ನು ತಾನೇ ಸರ್ವನಾಶ ಮಾಡಿಕೊಳ್ಳುತ್ತಾನೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ ಅವರು ಮಾರ್ಮಿಕವಾಗಿ ನುಡಿದರು.


ಇಂದು ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಲೇ.ಸಂ. ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ. ಕೆ. ಆರ್. ಸಿದ್ದಗಂಗಮ್ಮ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರಿನ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಗೌರವ ಕಾರ್ಯದರ್ಶಿ ಆರ್. ಬಿ. ಕಟ್ಟಿ ಅವರು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸುಧಾ ಪಾಟೀಲ ಅವರು ವಚನ ಸುಧೆಯನ್ನು ಪ್ರಸ್ತುತಪಡಿಸಿದರು.
ಈ ಸಾಹಿತ್ಯಿಕ ಸಮಾರಂಭದಲ್ಲಿ ಹಲವು ಮಹತ್ವದ ಕೃತಿಗಳು ಬಿಡುಗಡೆಗೊಂಡವು. ಸುಧಾ ಪಾಟೀಲ ಅವರ ‘ತೊಟ್ಟಿಲ ತೂಗುವ ಕೈ’ ಕೃತಿಯನ್ನು ಡಾ. ಕಮಲಾಬಾಯಿ ದೇಶಿಕ, ಇಂದಿರಾ ಮೋಟೆಬೆನ್ನೂರು, ಹಮೀದಾ ಬೇಗಂ ದೇಸಾಯಿ, ಸುನಂದಾ ಮುಳೆ ಮತ್ತು ರಾಜೇಶ್ವರಿ ಹೆಗಡೆ ಅವರು ಸೇರಿ ಲೋಕಾರ್ಪಣೆ ಮಾಡಿದರು. ಇದರೊಂದಿಗೆ ಡಾ. ನೀತಾ ರಾವ್ ಅವರ ‘ಶಾಪಗ್ರಸ್ತ ದೇವ ಕನ್ನಿಕೆಯರು’ ಮತ್ತು ಡಾ. ಬಸಮ್ಮ ಗಂಗನಹಳ್ಳಿ ಅವರ ‘ಭೂಗರ್ಭ’ ಕೃತಿಗಳು ಸಹ ಬಿಡುಗಡೆಯಾದವು.
ನಂತರ ನಡೆದ ಕವಿಗೋಷ್ಠಿಯಲ್ಲಿ ಡಾ. ಗೀತಾಂಜಲಿ ಸುಖಸಾರೆ, ವಿದ್ಯಾ ಹುಂಡೇಕರ, ಡಾ. ಹೇಮಾವತಿ ಸೊನೊಳ್ಳಿ, ಹೇಮಾ ಭರಭರಿ, ಸುನಂದಾ ಹಾಲಭಾವಿ ಮತ್ತು ನೂತನ ಕುಲಕರ್ಣಿ ಅವರು ತಮ್ಮ ಕವಿತೆಗಳನ್ನು ವಾಚಿಸುವ ಮೂಲಕ ನೆರೆದಿದ್ದ ಸಾಹಿತ್ಯಾಸಕ್ತರಿಗೆ ರಸದೌತಣ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರಿನ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ಅವರು, ಬೇರೋಬ್ಬರ ಅಹಂಕಾರಕ್ಕೆ ಇನ್ನೊಬ್ಬರು ಬಲಿಯಾಗುತ್ತಾರೆ. ಎಲ್ಲರೂ ಒಂದೇ ಎಂಬ ಭಾವನೆಯಿರದಿದ್ದರೇ, ಸಮಾಜವು ನಮ್ಮನ್ನು ಕಡೆಗಣಿಸುತ್ತದೆ. ಅಹಂಕಾರದ ಅಜ್ಞಾನ ಸರ್ವನಾಶದ ವರೆಗೆ ಕರೆದೊಯ್ಯುತ್ತದೆ. ಪುರಾಣದಲ್ಲಿಯೂ ಕಾಣಬಹುದು, ವಾಸ್ತವಾಗಿಯೂ ಕಾಣಬಹುದು, ಅಹಂಕಾರವನ್ನು ಬಿಟ್ಟು ಪ್ರೀತಿ, ಸ್ನೇಹ ಮತ್ತು ಸೌಹಾರ್ದತೆಯಿಂದ ಬಾಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಜ್ಯೋತಿ ಬಾದಾಮಿ, ಖಜಾಂಚಿ ಡಾ. ನೀತಾ ರಾವ್ ಹಾಗೂ ಕಾರ್ಯದರ್ಶಿ ಡಾ. ನಿರ್ಮಲ ಬಟ್ಟಲ ಅವರು ಶ್ರಮಿಸಿದರು.
