ಬೆಳಗಾವಿ ಜಿಲ್ಲೆಯ ಯಮಕನಮರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿನರಾಳ ಗ್ರಾಮದ ಬ್ಯಾಡರಟ್ಟಿ ಕ್ರಾಸ್ ಹತ್ತಿರ ಜೂಜಾಟದಲ್ಲಿ ನಿರತರಾಗಿದ್ದ ಒಂಬತ್ತು ಜನರನ್ನು ಬಂಧಿಸಲಾಗಿದ್ದು, ಅವರಿಂದ ಸಾವಿರಾರು ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದ ಪೊಲೀಸ್ ತಂಡವು ಜಿನರಾಳ ಗ್ರಾಮದ ಹದ್ದಿಯಲ್ಲಿರುವ ಬ್ಯಾಡರಟ್ಟಿ ಕ್ರಾಸ್ ಬಳಿಯ ಡೈಕ್ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಮಿಂಚಿನ ದಾಳಿ ನಡೆಸಿದೆ. ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಆಟವಾಡುತ್ತಿದ್ದ ಒಂಬತ್ತು ಜನರನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಬಂಧಿತರಲ್ಲಿ ಹುಕ್ಕೇರಿ ತಾಲೂಕಿನ ಹೊಸೂರು, ಯರನಾಳ ನಿವಾಸಿಗಳು ಹಾಗೂ ನೆರೆಯ ಗಡಹಿಂಗ್ಲಜ ತಾಲೂಕಿನ ಹಿಟ್ಟಿ ಮತ್ತು ಕಡಲಗಿ ಗ್ರಾಮದವರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯ ವೇಳೆ ಬಂಧಿತರಿಂದ ಒಟ್ಟು 23,730 ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ಸುಭಾಷ ಅಕ್ಕತಂಗೇರಹಾಳ, ಸಚಿನ ಪಾಟೀಲ, ಆಯುಬ ಖಲೀಪ, ರಾಜು ಘಸ್ತಿ, ಭರಮಪ್ಪಾ ಫಸ್ತಿ, ನಿಂಗಪ್ಪಾ ಪಾಟೀಲ, ರಾಜು ಪಟೋಲಿ, ಮಹಾವೀರ ಚೌಗಲಾ ಮತ್ತು ಮಹಮ್ಮದ ಸನದಿ ಎಂದು ಗುರುತಿಸಲಾಗಿದೆ. ಈ ಕುರಿತು ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 87/2026ರ ಅಡಿ ಕರ್ನಾಟಕ ಪೊಲೀಸ್ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
