ವಿಜಯಪುರ ಜಿಲ್ಲೆಯ ಆಲಮೇಲ ಮತ್ತು ಇಂಡಿಯಲ್ಲಿ ಜನತೆಯನ್ನು ಬೆಚ್ಚಿಬೀಳಿಸಿದ್ದ ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸೇರಿ ಮೂವರನ್ನು ಬಂಧಿಸಿ, ₹2.30 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸರಗಳ್ಳತನ ಪ್ರಕರಣಗಳ ಪತ್ತೆ ಹೆಚ್ಚಲು ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳ ಗುರುತು ಪತ್ತೆ ಸೇರಿ ಎಲ್ಲ ರೀತಿ ಮಾಹಿತಿಯನ್ನು ಕಲೆ ಹಾಕುವಲ್ಲಿ ತನಿಖಾ ತಂಡಗಳು ಯಶಸ್ವಿಯಾಗಿವೆ. ಪುಣೆಯ ದೀಪಕ ಪರಶುರಾಮ ಮಾಳಿ, ಪುಣೆ ನಿವಾಸಿ, ಕಲಬುರಗಿ ಮೂಲದ ಪ್ರಕಾಶ ರಾಮಚಂದ್ರ ಮಾತಂಗಿ ಎಂಬುವವರೇ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

