State

ಅಮೆರಿಕ ಯುದ್ಧ ನಿಲ್ಲಿಸಿ ಶಾಂತಿ ಮಾತುಕತೆ ನಡೆಸಲಿ…

Share

ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಯುದ್ಧ ಪೀಡಿತ ರಾಷ್ಟ್ರಗಳಲ್ಲಿರುವ ಕನ್ನಡಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಯುದ್ಧವನ್ನು ನಿಲ್ಲಿಸಿ ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸುವಂತೆ ಅವರು ಅಮೆರಿಕಕ್ಕೆ ಕರೆ ನೀಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜಾಗತಿಕ ಸಂಘರ್ಷದ ಈ ಸಂದರ್ಭದಲ್ಲಿ ಎಲ್ಲವನ್ನೂ ಶಾಂತಿಯಿಂದ ನಿಭಾಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು. ಯಾರ ಆಸ್ತಿಪಾಸ್ತಿಗೂ ನಷ್ಟವಾಗಬಾರದು ಹಾಗೂ ಮನುಕುಲದ ಹಿತ ಕಾಯಬೇಕು ಎನ್ನುವುದು ಭಾರತದ ಮೂಲ ಉದ್ದೇಶವಾಗಿದೆ. ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರಾಗಲಿ ಅಥವಾ ದೇಶದ ಯಾವುದೇ ಪ್ರಜೆಯಾಗಲಿ, ಅವರ ಪ್ರಾಣ ರಕ್ಷಣೆಗೆ ಮತ್ತು ಸುರಕ್ಷತೆಗೆ ಕೇಂದ್ರ ಸರ್ಕಾರವು ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಮುಂದುವರಿದು ಮಾತನಾಡಿದ ಅವರು, ನಮ್ಮ ದೇಶದ ಪ್ರತಿಭಾವಂತರು ವಿದೇಶಗಳಿಗೆ ಹೋಗಿ ವೃತ್ತಿ ನಡೆಸುತ್ತಿರುವ ಪರಿಣಾಮವಾಗಿಯೇ ಇಂದು ಆ ದೇಶಗಳು ಆರ್ಥಿಕವಾಗಿ ಬೆಳೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಮೆರಿಕ ಕೂಡಲೇ ಈ ಯುದ್ಧವನ್ನು ನಿಲ್ಲಿಸಬೇಕು ಮತ್ತು ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟ ಡಿಸಿಎಂ, ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಆಶಿಸಿದರು.

Tags:

error: Content is protected !!