ಬೆಳಗಾವಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿಂದು ವಿಶೇಷ ಪರಿಷತ್ ಸಭೆ ಜರುಗಿತು. 2026-27ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಮಂಡಿಸಿದ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ ಅವರು, ನಗರದ ಸಮಗ್ರ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕೆ ಒತ್ತು ನೀಡುವ 92 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ಗೆ ಚಾಲನೆ ನೀಡಿದ್ದಾರೆ.”


ಮಹಾನಗರ ಪಾಲಿಕೆಯ ಆಡಳಿತಾರೂಢ ಮಂಡಳಿಯು ಇಂದು ಬೆಳಗಾವಿ ನಗರದ ಅಭಿವೃದ್ಧಿಗಾಗಿ 442.54 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ ಅವರು ಮಂಡಿಸಿದ ಈ ಆಯವ್ಯಯದಲ್ಲಿ ಒಟ್ಟು 441.62 ಕೋಟಿ ರೂಪಾಯಿಗಳನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ವೆಚ್ಚ ಮಾಡಲು ನಿರ್ಧರಿಸಲಾಗಿದ್ದು, ಅಂತಿಮವಾಗಿ 92.32 ಲಕ್ಷ ರೂಪಾಯಿಗಳ ಉಳಿತಾಯವನ್ನು ತೋರಿಸಲಾಗಿದೆ. ಬಜೆಟ್ನಲ್ಲಿ ಎಸ್ಸಿ-ಎಸ್ಟಿ ವರ್ಗದ ಅಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಸ್ವಚ್ಛ ನಗರದ ಗುರಿಯೊಂದಿಗೆ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಪೌರಕಾರ್ಮಿಕರು ಮತ್ತು ಪಾಲಿಕೆ ಸಿಬ್ಬಂದಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಅವರಿಗಾಗಿ ಆರೋಗ್ಯ ವಿಮೆ ಹಾಗೂ ದಿನನಿತ್ಯದ ಉಪಹಾರ ವ್ಯವಸ್ಥೆಯನ್ನು ಘೋಷಿಸಲಾಗಿದೆ.

ವಿಶೇಷವಾಗಿ ಪರಿಸರ ಸ್ನೇಹಿ ಕಟ್ಟಡಗಳನ್ನು ಉತ್ತೇಜಿಸಲು ಅಂತಹ ಮನೆಗಳ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಸ್ವಾತಂತ್ರ್ಯ ಯೋಧರಿಗೆ ನೀಡಲಾಗುತ್ತಿರುವ ಶೇ. 10 ರಷ್ಟು ಆಸ್ತಿ ತೆರಿಗೆ ರಿಯಾಯಿತಿಯನ್ನು ಈ ವರ್ಷವೂ ಮುಂದುವರಿಸಲು ಪಾಲಿಕೆ ನಿರ್ಧರಿಸಿದೆ.
ಆಡಳಿತ ಪಕ್ಷದ ನಾಯಕ ಹನಮಂತ ಕೊಂಗಾಲಿ ಅವರು 92.32 ಲಕ್ಷ ಉಳಿತಾಯ ಮೌಲ್ಯದ ಬಜೆಟ್ ಮೊದಲ ಬಾರಿ ಮಂಡಿಸಲಾಗುತ್ತಿದೆ. ಶೇಕಡಾ 85 ರಷ್ಟು ಕರವನ್ನು ಸಂಗ್ರಹವನ್ನು ನಿರೀಕ್ಷಿಸಲಾಗಿದೆ ಎಂದು ಹೆಚ್ಚಿನ ಮಾಹಿತಿಯನ್ನು ನೀಡಿದರು.

ವಿಪಕ್ಷ ಸದಸ್ಯ ರವಿ ಸಾಳುಂಕೆ ಅವರು ಮೊದಲಿನ ಕಮಿಷ್ನರಂತೆ ರಸ್ತೆಗಿಳಿದು ಬಾಕಿ ಉಳಿದ ಕರವನ್ನು ಕೈಗಾರಿಕೋದ್ಯಮಗಳು, ವಾಣಿಜೋದ್ಯಮಗಳಿಂದ ಪಡೆಯಲು ಸಲಹೆ ನೀಡಿದರು. ಇನ್ನು ವಿಪಕ್ಷ ಸದಸ್ಯ ರಿಯಾಝ್ ಕಿಲ್ಲೇದಾರ ಅವರು ಬಾಕಿ ಕರ ಸಂದಾಯವಾಗುವವರೆಗೂ ಅಭಿವೃದ್ಧಿ ಅಸಾಧ್ಯ ಎಂದರು. ಇನ್ನು ಅಝೀಮ್ ಪಟ್ವೇಗಾರ ಅವರು ಬಜೆಟಿಗೆ ಸಂಬಂಧಿಸಿದಂತೆ ಸಭೆ ಕರೆದು ಇನ್ನಷ್ಟು ಅಧ್ಯಯನ ಮಾಡಬೇಕಿದೆ ಎಂದರು.

ಮೇಯರ್ ಮಂಗೇಶ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಉಪಮೇಯರ್ ವಾಣಿ ಜೋಶಿ, ಆಯುಕ್ತ ಕಾರ್ತಿಕ್ ಎಂ. ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
