ಬೆಳಗಾವಿಯ ಪ್ರತಿಷ್ಠಿತ ಶಾಂತಿ ವೃದ್ಧಾಶ್ರಮದ ವತಿಯಿಂದ ನೀಡಲಾಗುವ 2025-26ನೇ ಸಾಲಿನ ‘ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್’ ಅನ್ನು ಕ್ಯಾಂಟೋನ್ಮೆಂಟ್ ಬೋರ್ಡ್ ಆಡಳಿತದ ಶಾಲೆಗಳಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ಅಪಾರ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗಳ ಶ್ರೇಷ್ಠತೆಯನ್ನು ಗುರುತಿಸಿ ಇಂದು ಈ ವಿಶೇಷ ಗೌರವ ಸಮರ್ಪಿಸಲಾಯಿತು.”


ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ನಡೆಸುತ್ತಿರುವ ವಿವಿಧ ಶಾಲೆಗಳಿಗೆ ಅವುಗಳ ಗಣನೀಯ ಶೈಕ್ಷಣಿಕ ಸಾಧನೆಗಾಗಿ ‘ಶಾಲಾ ಎಕ್ಸಲೆನ್ಸ್ ಪ್ರಶಸ್ತಿ 2025-26’ ನೀಡಿ ಗೌರವಿಸಲಾಯಿತು. ಮಂಗಳವಾರ ಶಾಂತಿ ವೃದ್ಧಾಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಕ್ಯಾಂಟೋನ್ಮೆಂಟ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಚಲ್ವಾರ್ ಸುಧಾಮ ಹರಿವಿಜಯ್ ಅವರಿಗೆ ಪ್ರಶಸ್ತಿ ಟ್ರೋಫಿಯನ್ನು ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಮಹಾಪೌರರು ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ವಿಜಯ್ ಮೊರೆ ಅವರು, 1920 ರಿಂದಲೂ ನಿರಂತರವಾಗಿ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಆಶ್ರಮದ ಆಡಳಿತ ಮುಖ್ಯಸ್ಥೆ ಶ್ರೀಮತಿ ಮಾರಿಯಾ ವಿಜಯ್ ಮೊರೆ ಹಾಗೂ ನಿರ್ದೇಶಕ ಅಲನ್ ವಿಜಯ್ ಮೊರೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಮರಾಠಿ, ಉರ್ದು, ಇಂಗ್ಲಿಷ್ ಮಾಧ್ಯಮ ಹಾಗೂ ವಿಶೇಷ ಸಾಮರ್ಥ್ಯದ ಮಕ್ಕಳ ‘ಸ್ನೇಹಾಲಯ’ ಶಾಲೆಯ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಸ್ಮರಿಸಲಾಯಿತು. ಕ್ಯಾಂಟೋನ್ಮೆಂಟ್ ಬೋರ್ಡ್ ಶಾಲೆಗಳ ಬ್ರ್ಯಾಂಡ್ ಅಂಬಾಸಿಡರ್ ಸಂತೋಷ್ ಆರ್. ದರೆಕರ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಿಹಿಗಾನ ಹಾಗೂ ಸಾಂಸ್ಕೃತಿಕ ಮೆರುಗು ಕಂಡುಬಂದಿದ್ದು, ಗಣ್ಯರು ಹಾಗೂ ಆಶ್ರಮದ ನಿವಾಸಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.

