ಧಾರವಾಡದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಬೆಳಿಗ್ಗೆ ರಾಜಕೀಯ ನಾಯಕರು, ಮರಾಠಾ ಸಮಾಜದ ಮುಖಂಡರು ಧಾರವಾಡದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೂಡ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಶಿವಾಜಿ ಜಯಂತಿ ಅಂಗವಾಗಿ ಮರಾಠಾ ಸಮಾಜದ ವಿವಿಧ ಯುವಕ ಮಂಡಳದವರು ಐದಾರು ಡಿಜೆಗಳನ್ನೂ ತರಿಸಿದ್ದರು. ಮಧ್ಯಾಹ್ನ ಡಿಜೆಗಳ ಅಬ್ಬರ ಧಾರವಾಡದಲ್ಲಿ ಜೋರಾಗಿಯೇ ನಡೆಯಿತು. ಶಿವಾಜಿ ವೃತ್ತದ ಬಳಿ ನಾಲ್ಕೈದು ಡಿಜೆಗಳು ಮುಖಾಮುಖಿಯಾಗಿ ಅಬ್ಬರಿಸಿದವು. ಸಾವಿರಾರು ಜನ ಈ ಡಿಜೆ ಸೌಂಡಿಗೆ ಹೆಜ್ಜೆ ಕೂಡ ಹಾಕಿದರು. ಬೆಳಿಗ್ಗೆಯಿಂದಲೇ ಮರಾಠಾ ಸಮಾಜದ ಯುವಕರು ಬೈಕ್ ಹಾಗೂ ಕಾರುಗಳಿಗೆ ಕೇಸರಿ ಬಾವುಟ ಕಟ್ಟಿಕೊಂಡು ಮೆರವಣಿಗೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಛತ್ರಿಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಡಿಜೆ ಅಬ್ಬರದೊಂದಿಗೆ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಾಲ್ಕೈದು ಡಿಜೆಗಳ ಅಬ್ಬರ ಧಾರವಾಡದಲ್ಲಿ ಜೋರಾಗಿಯೇ ಇದ್ದಿದ್ದರಿಂದ ವಾಹನ ಸಂಚಾರಕ್ಕೆ ಕೊಂಚ ಸಮಸ್ಯೆ ಕೂಡ ಉಂಟಾಯಿತು. ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಾಗಿತ್ತು.
