ಮೂರು ಬಾರಿ SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಮೊದಲನೆಯ ಸ್ಥಾನ ಪಡೆದ ಚಿಕ್ಕೋಡಿಯನ್ನು ಪ್ರಸ್ತಕ ಸಾಲಿನ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರಬೇಕೆಂಬ ಛಲ ಹೊತ್ತು ಜಿಲ್ಲೆ ವ್ಯಾಪ್ತಿಗೆ ಬರುವ ಪ್ರತಿ ಹಳ್ಳಿಗಳಿಗೆ ಚಿಕ್ಕೋಡಿ ಡಿಡಿಪಿಐ ಸೀತಾರಾಮ ಭೆಟ್ಟಿ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಪರೀಕ್ಷಾ ಸಿದ್ಧತೆಯ ಅರಿವು ಮೂಡಿಸುತ್ತಿದ್ದಾರೆ.


ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ,ಕಾಗವಾಡ, ಅಥಣಿ, ಹುಕ್ಕೇರಿ, ಗೋಕಾಕ್, ಮೂಡಲಗಿ,ರಾಯಬಾಗ ಎಂಟು ತಾಲೂಕುಗಳನ್ನು ಒಳಗೊಂಡಿದ್ದು ಒಟ್ಟಾರಿಯಾಗಿ 621 ಪ್ರೌಢಶಾಲೆಗಳು ಇಂದು ಎಸ್.ಎಸ್. ಎಲ್. ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. 2025-2026ನೇ ಸಾಲಿನಲ್ಲಿ ಒಟ್ಟು 47540 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 621 ಶಾಲೆಗಳಿದ್ದು 240 ಸರ್ಕಾರಿ ಶಾಲೆಗಳು, 152 ಅನುದಾನಿತ ಶಾಲೆಗಳು, 229 ಖಾಸಗಿ ಶಾಲೆಗಳಿದ್ದು,ಎಲ್ಲಾ ಶಾಲೆಗಳ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ತೆಗೆದುಕೊಂಡು ಎಲ್ಲರೂ ಉತ್ತೀರ್ಣರಾಗಿರಬೇಕು. ರಾಜ್ಯಕ್ಕೆ ಪ್ರಥಮ ಸ್ಥಾನ ಬರಬೇಕೆಂಬ ಮಹಾದಾಸೆಯನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾ ಆದ ಸೀತಾರಾಮ ಆಶಯ ವ್ಯಕ್ತಪಡಿಸಿದ್ದಾರೆ.

ಈ ಕಾರಣಕ್ಕಾಗಿ ಕಚೇರಿಯ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಚಿಕ್ಕೋಡಿಯ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳ ಹಳ್ಳಿಗಳಿಗೆ ಸಿಬ್ಬಂದಿಗಳೊಂದಿಗೆ ಭೇಟಿಯಾಗುತ್ತಿದ್ದಾರೆ. ಈಗಾಗಲೇ ಕೆರೂರು, ಸದಲಗಾ, ಬೆಳಕೂಡ, ಅಂಕಲಿ, ಕರೋಶಿ ಗ್ರಾಮಗಳಿಗೆ ಭೇಟಿ ನೀಡಿ ಹಿಂದುಳಿದ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳ ಗುರುತಿಸಿ ರಾತ್ರಿ ಸಮಯದಲ್ಲಿ ಶಾಲೆಯಲ್ಲೇ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.
ಉಪನಿರ್ದೇಶಕರಾದ ಸೀತರಾಮು ಅವರು ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಬೇಕೆಂದು ತಿಳಿಸಿದ್ದಾರೆ. ಅದರಂತೆ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಿಕ್ಷಣಾಧಿಕಾರಿಗಳು ಚಿಕ್ಕೋಡಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕೆಂಬ ಆಸೆಯನ್ನು ಹೊಂದಿ ಕೆಲಸ ಮಾಡುತ್ತಿದ್ದಾರೆ. ಈ ಶ್ರಮಕ್ಕೆ ಚಿಕ್ಕೋಡಿ ತಾಲೂಕಿನ ತಹಸಿಲ್ದಾರ್ ರಾಜೇಶ ಬುರ್ಲಿ ವಿಭಾಗಾಧಿಕಾರಿಯಾದ ಸುಭಾಷ ಸಂಪಾಗಾವಿ ಅವರು ಸಹ ವಿದ್ಯಾರ್ಥಿಗಳ ಮನೆ ಮನೆಗೆ ಮತ್ತು ವಸತಿ ನಿಲಯಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ.
