ರೈತರ ಸುಖ-ಸಮೃದ್ಧಿಗಾಗಿ ಶಿವನಲ್ಲಿ ಪ್ರಾರ್ಥನೆ

1. ದಕ್ಷಿಣ ಕಾಶಿ ಕಪಿಲೇಶ್ವರ ಸನ್ನಿಧಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
2. ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯ ಕೋರಿದ ಸಚಿವರು
3. ರೈತರ ಬದುಕು ಹಸನಾಗಲಿ ಎಂದು ಚನ್ನರಾಜ್ ಹಟ್ಟಿಹೊಳಿ ಪ್ರಾರ್ಥನೆ
4. ಇಂಡಿಯಾ-ಪಾಕ್ ಪಂದ್ಯದಲ್ಲಿ ಭಾರತ ಗೆಲುವಿಗಾಗಿ ಶಿವನಲ್ಲಿ ಮೊರೆ

ಮಹಾಶಿವರಾತ್ರಿಯ ಪವಿತ್ರ ದಿನದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯ ಸುಪ್ರಸಿದ್ಧ ಕಪಿಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ಆಗಮಿಸಿದ ಸಚಿವರು ಲೋಕ ಕಲ್ಯಾಣಕ್ಕಾಗಿ ಶಿವನಲ್ಲಿ ಪ್ರಾರ್ಥಿಸಿದರು.
ಬೆಳಗಾವಿಯ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಕಪಿಲೇಶ್ವರ ದೇವಾಲಯದಲ್ಲಿ ಇಂದು ಮುಂಜಾನೆಯಿಂದಲೇ ಭಕ್ತ ಸಾಗರ ಹರಿದುಬರುತ್ತಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಾಯಿ, ಪುತ್ರ ಮೃಣಾಲ್ ಹೆಬ್ಬಾಳ್ಕರ್ ಮತ್ತು ಕುಟುಂಬಸ್ಥರೊಂದಿಗೆ ಆಗಮಿಸಿ ಶಿವನ ದರ್ಶನ ಪಡೆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ನಾಡಿನ ಜನತೆಯ ಕಷ್ಟ-ಕಾರ್ಪಣ್ಯಗಳನ್ನು ಭಗವಾನ್ ಶಂಕರನು ದೂರಗೊಳಿಸಲಿ. ಎಲ್ಲೆಡೆ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ. ಜನಸೇವೆ ಮಾಡಲು ದೇವರು ನಮಗೆ ಇನ್ನಷ್ಟು ಶಕ್ತಿ ಮತ್ತು ಆಶೀರ್ವಾದ ನೀಡಲಿ” ಎಂದು ಶಿವರಾತ್ರಿ ಹಬ್ಬದ ಶುಭಾಶಯ ಕೋರಿದರು.ಬೈಟ್
ಇನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಕೂಡ ಪ್ರತಿ ವರ್ಷದಂತೆ ಈ ಬಾರಿಯೂ ಕುಟುಂಬ ಸಮೇತರಾಗಿ ಶಿವನ ಆರಾಧನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದ್ದು ರೈತರ ಜೀವನ ಸುಗಮವಾಗಲಿ ಎಂದು ಆಶಿಸಿದರು. ಜೊತೆಗೆ ಕುತೂಹಲಕಾರಿ ವಿಷಯವೆಂದರೆ, ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವೇ ಜಯಭೇರಿ ಬಾರಿಸಲಿ ಎಂದು ದಕ್ಷಿಣ ಕಾಶಿಯ ಶಿವನಲ್ಲಿ ವಿಶೇಷವಾಗಿ ಬೇಡಿಕೊಂಡರು.
ಈ ಸಂದರ್ಭದಲ್ಲಿ ಹಿತಾ ಹೆಬ್ಬಾಳ್ಕರ್ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಉಪಸ್ಥಿತರಿದ್ದರು.
