ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಎಸ್. ಕೋಸಂಬೆ ಅವರು ಶುಕ್ರವಾರ ಬೆಳಗಾವಿಯ ಖಡೆಬಜಾರ್ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅವರು, ಮಕ್ಕಳ ನ್ಯಾಯ ಕಾಯ್ದೆ-2015ರ ಅನ್ವಯ ಪದಾಧಿಕಾರಿಗಳ ಮಾಹಿತಿ ಹಾಗೂ ಮಕ್ಕಳ ಸಹಾಯವಾಣಿ 1098ರ ಫಲಕಗಳನ್ನು ತಕ್ಷಣವೇ ಶಾಶ್ವತವಾಗಿ ಅಳವಡಿಸುವಂತೆ ಖಡಕ್ ಸೂಚನೆ ನೀಡಿದರು. ಅಲ್ಲದೆ, ಮಕ್ಕಳ ಪ್ರಕರಣಗಳ ರಿಜಿಸ್ಟ್ರಾರ್ ಹಾಗೂ ‘ತೆರೆದ ಮನೆ’ ಕಾರ್ಯಕ್ರಮದ ವಹಿಗಳನ್ನು ಪರಿಶೀಲಿಸಿ, ಅವುಗಳ ಸಮರ್ಪಕ ನಿರ್ವಹಣೆಗೆ ನಿರ್ದೇಶಿಸಿದರು.


ಮಕ್ಕಳ ಅಪಹರಣ, ಪೋಕ್ಸೋ ಹಾಗೂ ಬಾಲ್ಯ ವಿವಾಹದಂತಹ ಗಂಭೀರ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ವರದಿ ಮಾಡುವುದು ಕಡ್ಡಾಯ ಎಂದು ಅಧ್ಯಕ್ಷರು ಎಚ್ಚರಿಸಿದರು. ಪೊಲೀಸ್ ಠಾಣೆಗಳಲ್ಲಿ ಕಂಡುಬಂದ ಲೋಪದೋಷಗಳ ಪಟ್ಟಿಯನ್ನು ಸಿದ್ಧಪಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲಿನ ಎಸಿಪಿಯವರಿಗೆ ತಿಳಿಸಿದರು. ಈ ಭೇಟಿಯ ವೇಳೆ ಬೆಳಗಾವಿ ನಗರ ಕ್ರೈಂ ವಿಭಾಗದ ಎಸಿಪಿ ರಘು ಜೆ. ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ಪರ್ವೀನ್ ಉಪಸ್ಥಿತರಿದ್ದರು.
