ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಯೇ ನಡೆಯುತ್ತಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು. ಸಂಸದ ತೇಜಸ್ವಿಸೂರ್ಯ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿಯೇ ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಆಲಮಟ್ಟಿ ಯೋಜನೆಗೆ ಅನುದಾನ ನೀಡಿಲ್ಲ, ಕಾವೇರಿ ವಿಚಾರವಾಗಿ ಮಾತನಾಡುವ ಧೈರ್ಯವೂ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು. ಕೇವಲ ಗ್ಯಾರಂಟಿ ಗ್ಯಾರಂಟಿ ಎನ್ನುವುದನ್ನು ಬಿಟ್ಟರೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವುದೇ ರಾಜ್ಯ ಸರ್ಕಾರದ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದರು. ಅಲ್ಪ ಸಂಖ್ಯಾತರ ಸಾಲಮನ್ನಾ ಮಾತ್ರ ಮಾಡಲಾಗಿದೆ, ದಲಿತರು, ಹಿಂದೂಳಿದವರು ಮತ್ತು ಇತರೆ ವರ್ಗದವರು ಮತ ಹಾಕಿಲ್ಲವೇ? ಎಂದು ಪ್ರಶ್ನಿಸಿದರು. ಸಾಲಮನ್ನಾ ಮಾಡುವುದಾದರೆ ಎಲ್ಲ ವರ್ಗಗಳಿಗೂ ಸಮಾನವಾಗಿ ಮಾಡಬೇಕಿತ್ತು ಎಂದು ಯತ್ನಾಳ ಒತ್ತಾಯಿಸಿದರು. ಇದೇ ವೇಳೆ,
ರಾಹುಲ್ ಗಾಂಧಿ ವಿದೇಶಗಳಿಗೆ ಹೋಗಿ ನಮ್ಮ ದೇಶದ ವಿರುದ್ಧ ಮಾತನಾಡುತ್ತಾರೆ. ಇಂತಹ ವ್ಯಕ್ತಿ ವಿರೋಧ ಪಕ್ಷದ ನಾಯಕ ನಾಗಿರುವುದೇ ದುರಂತ ಎಂದು ಲೇವಡಿ ಮಾಡಿದರು.
ಇನ್ನೂ, ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪಯಣ ಮಾಡಿದ್ದಾರೆ. ಇದು ಸರ್ಕಾರದ ಪತನದ ದೆಹಲಿ ಪಯಣ ಎಂದು ಹೇಳುವ ಮೂಲಕ ಯತ್ನಾಳ ಹೊಸ ಬಾಂಬ್ ಸಿಡಿಸಿದರು. ರಾಜ್ಯ ಸರ್ಕಾರದ ಅಂತ್ಯಕಾಲ ಬಂದಿದೆ ಎಂದರು.
