ಉದ್ಘಾಟನೆಯ ಅದ್ಧೂರಿತನ ಹದಿನೈದೇ ದಿನಕ್ಕೆ ಮಕಾಡೆ ಮಲಗಿದೆ; ನಂದಗಡದ ಕೆರೆ ಮಧ್ಯೆ ರಾಯಣ್ಣನ ಮೂರ್ತಿ ಕತ್ತಲಲ್ಲಿ ಕರಗುತ್ತಿದ್ದರೆ, ಅಭಿವೃದ್ಧಿ ಪ್ರಾಧಿಕಾರ ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದೆ. ಇದರಿಂದಾಗಿ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಿತ್ತೂರು ಸಂಸ್ಥಾನದ ಅಪ್ರತಿಮ ವೀರ ಸಂಗೊಳ್ಳಿ ರಾಯಣ್ಣನ ಪುಣ್ಯಭೂಮಿ ನಂದಗಡದಲ್ಲಿ ಈಗ ಕತ್ತಲೆ ಆವರಿಸಿದೆ. ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಿದ್ದ ಕೆರೆ ಮಧ್ಯದ ರಾಯಣ್ಣನ ಭವ್ಯ ಮೂರ್ತಿ, ಈಗ ನಿರ್ವಹಣೆಯಿಲ್ಲದೆ ಕತ್ತಲಲ್ಲಿ ಕರಗಿ ಹೋಗುತ್ತಿದೆ. ಉದ್ಘಾಟನೆಯ ಸಮಯದಲ್ಲಿ ದೀಪಾಲಂಕಾರಗಳಿಂದ ಝಗಮಗಿಸುತ್ತಿದ್ದ ಈ ಕ್ಷೇತ್ರ, ಕೇವಲ ಹದಿನೈದು ದಿನಗಳಲ್ಲಿ ಕಳೆಯಿbase ಕಳೆದುಕೊಂಡಿರುವುದು ದುರ್ದೈವದ ಸಂಗತಿ. ಲೋಕಾರ್ಪಣೆಯ ಸಂಭ್ರಮ ಮಾಸುವ ಮುನ್ನವೇ ಇಂತಹ ಸ್ಥಿತಿ ನಿರ್ಮಾಣವಾಗಿರುವುದು ರಾಯಣ್ಣನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಆರ್. ಶಾಲಿನಿ ಅವರ ದಿವ್ಯ ನಿರ್ಲಕ್ಷ್ಯದಿಂದಾಗಿ ಇಡೀ ಆವರಣ ಈಗ ಅವ್ಯವಸ್ಥೆಯ ತಾಣವಾಗಿದೆ. ಒಂದು ಕಡೆ ಅರೆಬರೆ ಫೇವರ್ಸ್ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೆ, ಮತ್ತೊಂದೆಡೆ ಕೆರೆಯ ದಂಡೆಯ ಮೇಲೆ ನಾಯಿಗಳ ಹಿಂಡು ಅಡ್ಡಾಡುತ್ತಿವೆ. ಕೇವಲ ಪ್ರಚಾರಕ್ಕಾಗಿ ಕಾಟಾಚಾರಕ್ಕೆ ಉದ್ಘಾಟನೆ ಮಾಡಿಸಿ, ನಂತರ ಸ್ಮಾರಕದತ್ತ ತಿರುಗಿಯೂ ನೋಡದ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹದಗೆಟ್ಟಿರುವ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
