ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದಲ್ಲಿ ಇಂದು ಆಧ್ಯಾತ್ಮಿಕ ಸಂಭ್ರಮ ಮೇಳೈಸಿತ್ತು. ಆಶ್ರಮದ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ದೈವ ಸ್ವರೂಪಿ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.


ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದಲ್ಲಿ ಫೆಬ್ರವರಿ 4ರ ಬುಧವಾರದಂದು ಶ್ರೀ ಸ್ವಾಮಿ ಸಮರ್ಥ ಹಾಗೂ ಶ್ರೀ ವಿಠ್ಠಲ-ರುಕುಮಾಯಿ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬಾಮನವಾಡಿ ಗ್ರಾಮದಿಂದ ಆಶ್ರಮದವರೆಗೆ ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು. ಇದೇ ಸಂದರ್ಭದಲ್ಲಿ ಆಶ್ರಮದ ಮುಂಬರುವ ನೂತನ ಕಟ್ಟಡ ‘ಚಂದನ್ ಕಮಲ್’ಗೆ ಗಣ್ಯರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಹಿರಿಯ ಜೀವಗಳಿಗೆ ಹೊಸ ಆಸರೆ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು.

ಧಾರ್ಮಿಕ ವಿಧಿವಿಧಾನಗಳ ನಂತರ ನಡೆದ ಮಹಾಪ್ರಸಾದದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ಅಜರಾ ವಾರಕರಿ ಮಂಡಳಿಯವರಿಂದ ನಡೆದ ಭಜನೆ ಮತ್ತು ಕೀರ್ತನೆ ಕಾರ್ಯಕ್ರಮವು ಭಕ್ತರನ್ನು ಭಕ್ತಿ ಸಾಗರದಲ್ಲಿ ತೇಲಿಸಿತು. ಆಶ್ರಮದ ಕಾರ್ಯಾಧ್ಯಕ್ಷರಾದ ವಿಜಯ ಮೋರೆ ಮತ್ತು ಶಾಂತಾಯಿ ಕುಟುಂಬದವರು ಸಮಸ್ತ ಭಕ್ತಾದಿಗಳನ್ನು ಬರಮಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ವೇಳೆ ಮಾತನಾಡಿದ ವಿಜಯ್ ಮೋರೆ ಅವರು ಇಲ್ಲಿಯ ವರೆಗೂ ಸುಮಾರು 1549 ಅಪರಿಚಿತರ ಅಂತ್ಯಸಂಸ್ಕಾರ, ರದ್ಧಿಯಿಂದ ಬುದ್ಧಿಯ ಕಡೆಗೆ, ಶಾಂತಾಯಿ ವೃದ್ಧಾಶ್ರಮದಂತಹ ಉಪಕ್ರಮಗಳಿಗೆ ವಿಜಯ್ ಪಾಟೀಲ್ ನಾಗೇಶ್ ಪಾಟೀಲ್ ಅವರು ಪ್ರೇರಣೆಯಾಗಿದ್ದಾರೆ ಎಂದರು.

ಹಿರಿಯರ ಸೇವೆಯ ಜೊತೆಗೆ ಆಧ್ಯಾತ್ಮಿಕ ಚಟುವಟಿಕೆಗಳಿಗೂ ಆಶ್ರಮ ಸಾಕ್ಷಿಯಾದದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.

