ಸಾಲದ ವಿಚಾರವಾಗಿ ಉಂಟಾದ ಕುಟುಂಬ ಕಲಹ ಪತ್ನಿಯ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಕೊಲೆಗೈದ ಬಳಿಕ ಆರೋಪಿ ಪತಿ ಕೇಶ್ವಾಪೂರ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ತೈಸಿನ್ ಶಿಗ್ಗಾಂ (28) ಹತ್ಯೆಯಾದ ಮಹಿಳೆ. ಪತಿ ಇರ್ಫಾನ್ ಶಿಗ್ಗಾಂ ಚಾಕುವಿನಿಂದ ಕುತ್ತಿಗೆ ಸೇರಿದಂತೆ ನಾದು ಕಡೆ ಇರಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಗಾಂಧೀವಾಡದ ನಿವಾಸಿಗಳಾದ ದಂಪತಿಗಳು ಕಳೆದ ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರಕ್ಕೆ ಬಂದಿದ್ದರು. ಗೌಂಡಿ ಕೆಲಸ ಮಾಡುತ್ತಿದ್ದ ಇರ್ಫಾನ್ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅದನ್ನು ಮರುಪಾವತಿ ಮಾಡುವ ವಿಚಾರದಲ್ಲಿ ದಂಪತಿಗಳ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ. ತೆಗೆದುಕೊಂಡ ಸಾಲವನ್ನು ದುಡಿದು ತೀರಿಸುವಂತೆ ಪತ್ನಿ ತೈಸಿನ್ ಒತ್ತಾಯಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ತೈಸಿನ್ ಸಹೋದರ ₹20 ಸಾವಿರ ಹಣ ನೀಡಿದ್ದರೂ ಜಗಳ ಮುಂದುವರಿದಿದೆ. ಮಾತಿನ ಚಕಮಕಿ ತಾರಕಕ್ಕೇರಿದ ವೇಳೆ ಕೋಪಗೊಂಡ ಇರ್ಫಾನ್ ಚಾಕುವಿನಿಂದ ದಾಳಿ ನಡೆಸಿ ಹತ್ಯೆಗೈದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಘಟನೆಯ ಬಳಿಕ ಆರೋಪಿ ಸ್ವತಃ ಕೇಶ್ವಾಪೂರ್ ರಸ್ತೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಗೋಕುಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಗಳಿಬ್ಬರು ಚಿಕ್ಕ ಮಕ್ಕಳು ಅನಾಥರಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
