ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಓಂಕಾರ ಆಶ್ರಮ ಮಠದ ಶ್ರೀ ಶಿವಶಂಕರ ಸ್ವಾಮೀಜಿ ಅವರು ಅಕಾಲಿಕ ನಿಧನ ಹಿನ್ನೆಲೆ ಗುರುವಾರ ಅವರನ್ನು ಸಾಂಪ್ರದಾಯಿಕವಾಗಿ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.

ಶ್ರೀ ಶಿವಶಂಕರ ಸ್ವಾಮೀಜಿಗಳು ಬುಧವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬುಧವಾರ ಸಂಜೆಯಿಂದ ಗುರುವಾರ ಬೆಳಗ್ಗೆ 8.30 ರವರೆಗೆ ದರ್ಶನಕ್ಕೆ ಇಡಲಾಗಿತ್ತು. ಭಕ್ತರು ರಾತ್ರಿಯಿಡಿ ಭಜನೆ ಮಾಡಿದರು. ನಂತರ ಗ್ರಾಮದ ಜನರು ಗ್ರಾಮದ ಪ್ರಮುಖ ಬೀದಿಗಳಲ್ಲಿ ನೀರು ಸಿಂಪಡಿಸಿ ರಂಗೋಲಿ ಬಿಡಿಸಿದ್ದರು. ಅಲ್ಲದೇ ಶಾಲಾ ಕಾಲೇಜು, ಅಂಗಡಿ ಮುಂಗಟುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ನಂತರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಾದ ಮಹಾದೇವ ಮಂದಿರ, ಬಸ್ ನಿಲ್ದಾನ, ಕಾಟೆ ಶಾಲೆ, ಜೈನ್ ಬಸದಿ, ಕುಂಬಾರ ಗಲ್ಲಿ, ಬಸವ ವೃತ್ತ, ಮಹಾತ್ಮ ಫುಲೆ ವೃತ್ತದಿಂದ ಓಂಕಾರ ಆಶ್ರಮ ಮಠದವರೆಗೆ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಹೂವು ಹಾರಿಸಿ, ಓಂ ನಮ ಶಿವಾಯ ಪಠಣ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಬಾವನಸೌಂದತ್ತಿ, ದಿಗ್ಗೇವಾಡಿ, ಯಡ್ರಾಂವ, ಅಂಕಲಿ, ಯಡೂರ, ಇಂಗಳಿ, ಮಾಂಜರಿ, ನಸಲಾಪುರ, ಹಳೆ ದಿಗ್ಗೇವಾಡಿ, ಜಲಾಲಪುರ, ಭಿರಡಿ ಚಿಂಚಲಿ ಸೇರಿದಂತೆ ವಿವಿಧ ಗ್ರಾಮದಭಕ್ತರು ಆಗಮಿಸಿ ಶಿವಶಂಕರ ಸ್ವಾಮೀಜಿ ದರ್ಶನ ಪಡೆದರು. ಸಹಸ್ರಾರು ಸಂಖ್ಯೆಯಲ್ಲಿ ಪಾರ್ಥಿವ ಶರೀರಮೆರವಣಿಗೆಯಲ್ಲಿ ಭಾಗಿಯಾಗಿ, ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು.
ಶಿವಶಂಕರ ಶ್ರೀಗಳ ಹಿನ್ನೆಲೆ;
ಶಿವಶಂಕರ ಸ್ವಾಮೀಜಿಗಳು ಮಹಾರಾಷ್ಟ್ರದ ಮೀರಜ್ ತಾಲೂಕಿನ ಖಟಾಂವ ಗ್ರಾಮದವರು. ತಂದೆ ಶಂಕರ, ತಾಯಿ ಬಸಲಿಂಗಮ್ಮ ಮುದ್ದಿನ ಮಗನಾಗಿದ್ದರು. 16 ನೇ ವಯಸ್ಸಿನಲ್ಲಿ ವೈರಾಗ್ಯ ತಾಳಿ, ಪರಮಪೂಜ್ಯ ಶ್ರೀಗುರುಬಸವೇಶ್ವರರಿಂದ ಶಿವದೀಕ್ಷೆ ಪಡೆದರು. ನಂತರ ಭಾರತದಲ್ಲಿ ಅನೇಕ ಕಡೆ ಸಂಚರಿಸಿ ಅನೇಕ ಅನುಷ್ಠಾನಗಳನ್ನು ಮಾಡಿದ್ದರು.
ಗ್ರಾಮಕ್ಕೆ ಆಗಮನ:
ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮಕ್ಕೆ 1988-89 ರಲ್ಲಿ ಆಗಮಿಸಿ ಮೊದಲು ಮಹಂತ ಮಹರಾಜರ ಮಠಕ್ಕೆ ಬಂದು ಸನ್ಯಾಸಿ ಜೀವ ಆರಂಭಿಸಿದರು. 1992 ರಲ್ಲಿ ಓಂಕಾರ ಆಶ್ರಮ ಮಠ ಸ್ಥಾಪಿಸಿ ಬಂದ ಭಕ್ತರಿಗೆ ಶಿವ ಭಜನೆ, ಪ್ರವಚನ ನಡೆಸುವ ಮೂಲಕ ಗಮನ ಸೆಳೆಯುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆಸುತ್ತ ಬಂದಿದ್ದರು.
ಆಯುರ್ವೇಧದಲ್ಲಿ ಪರಿಣಿತಿ:
ಶ್ರೀ ಶಿವಶಂಕರ ಸ್ವಾಮೀಜಿಗಳು ಆಯುರ್ವೇಧದಲ್ಲಿ ಎಂ ಎಪದವಿ ಪಡೆದಿದ್ದರು. ವಿವಿಧ ರೋಗಗಳಿಗೆ ಆಯುರ್ವೇಧ ಚಿಕಿತ್ಸೆ ನೀಡಿ ಸಾಕಷ್ಟು ರೋಗಿಗಳನ್ನು ಗುಣಪಡಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ರೋಗಿಗಳು ಮಠಕ್ಕೆ ಆಗಮಿಸಿ ಆಯುರ್ವೇಧ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಇಂತಹ ಕೈಗುಣ ಇರುವ ಶ್ರೀಗಳು ಆಯುರ್ವೇಧದಲ್ಲಿ ಪರಿಣಿತಿ ಹೊಂದಿದ್ದರು.
ಜನರ ಜೊತೆ ಒಳ್ಳೆ ಬಾಂಧವ್ಯ;
ಕೇವಲ ಬಾವನಸೌಂದತ್ತಿ ಗ್ರಾಮ ಅಷ್ಟೇ ಅಲ್ಲ. ರಾಯಬಾಗ ತಾಲೂಕಿನ ಹಾಗೂ ಹೊರಗಿನಿಂದ ಬರುವ ಭಕ್ತಾಧಿಗಳಿಗೂ ಒಂದೇ ತರಹದಿಂದ ನೋಡದ ಶ್ರೀಗಳಲ್ಲ ಅವರು. ಸಾಕಷ್ಟು ಜನಪ್ರತಿನಿಧಿಗಳೂ ಆಗಮಿಸಿ ಶಿವಶಂಕರ ಸ್ವಾಮೀಜಿಗಳ ಆಶಿರ್ವಾದ ಪಡೆಯುತ್ತಿದ್ದರು.
ಗೋಶಾಲೆ, ಸಾವಯುವ ಕೃಷಿ;
ಓಂಕಾರ ಆಶ್ರಮ ಮಠದ ಆಸ್ತಿಯಲ್ಲಿ ಗೋಶಾಲೆ ಆರಂಭಿಸಿದ್ದರು, ಜೊತೆ ಸಾವಯುವ ಕೃಷಿ ಬೆಳೆಸುವುದರ ಮೂಲಕ ರಾಯಬಾಗ ತಾಲೂಕಿಗೆ ಅನೇಕ ಯುವ ಕೃಷಿಕರಿಗೆ ಮಾದರಿಯಾಗಿದ್ದರು. ಶ್ರೀಗಳಮಾದರಿ ಕೃಷಿ ನೋಡಿ ಎಷ್ಟೊ ಜನರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು ಯಶಸ್ವಿಯಾಗಿದ್ದರು.
ಜನಸ್ನೇಹಿ ಸ್ವಾಮೀಜಿಗಳು ಇಂದು ಜನರನ್ನು ಅಗಲಿ ಇಹಲೋಕಕ್ಕೆ ತ್ಯೇಜಿಸಿದ್ದು ಸಾಕಷ್ಟು ಭಕ್ತರು ಕಂಬನಿ ಮಿಡಿದಿದ್ದಾರೆ. ಈ ವೇಳೆ ಗ್ರಾಮಸ್ಥರು, ಸ್ವಾಮೀಜಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
