ಬುದ್ಧಿಮಾತು ಹೇಳಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗೌಶಿಯಾ ಟೌನ್ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದ ಈ ಪ್ರಕರಣದಲ್ಲಿ ಅಹ್ಮದ್ ರಜಾಕ್ ಶಹಪೂರ್ (48) ಹತ್ಯೆಯಾಗಿದ್ದಾರೆ.

ಮೃತ ಅಹ್ಮದ್ ರಜಾಕ್ ಹಳೆ ಹುಬ್ಬಳ್ಳಿ ನಿವಾಸಿಯಾಗಿದ್ದು, ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಸದ್ದಾಂ ಎಂದು ಗುರುತಿಸಲಾಗಿದ್ದು, ಆತ ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿಯಂತೆ, ನಿನ್ನೆ ರಾತ್ರಿ ಪತ್ನಿಯನ್ನು ಕರೆದುಕೊಂಡು ಹೋಗಲು ಸದ್ದಾಂ ಮನೆಗೆ ಬಂದಿದ್ದು, ಮನೆಯ ಹೊರಗೆ ನಿಂತು ಗಲಾಟೆ ಮಾಡುತ್ತಿದ್ದನು. ಈ ಸಂದರ್ಭ ಅಹ್ಮದ್ ರಜಾಕ್ ಬುದ್ದಿಮಾತು ಹೇಳಲು ಮುಂದಾದಾಗ, ಕೋಪಗೊಂಡ ಸದ್ದಾಂ ದಿಢೀರನೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿದಿದೆ.
