ಐತಿಹಾಸಿಕ ನಂದಗಡ ಗ್ರಾಮದ ಶ್ರೀ ಚನ್ನವೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ‘ಬಸವ ಬುತ್ತಿ’ ಮೆರವಣಿಗೆಯು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು. ನೂರಾರು ತಾಯಂದಿರು ಸಾಂಪ್ರದಾಯಿಕ ಬುತ್ತಿಗಳನ್ನು ತಲೆಯ ಮೇಲೆ ಹೊತ್ತು ಸಾಗುವ ಮೂಲಕ ಮಠದ ಅಜ್ಜನ ಜಾತ್ರೆಯ ವೈಭವವನ್ನು ಹೆಚ್ಚಿಸಿದರು.


ನಂದಗಡ ಗ್ರಾಮದ ಬಸವೇಶ್ವರ ಮಂದಿರದಿಂದ ಶ್ರೀ ವಿರಕ್ತಮಠದವರೆಗೆ ಬಸವ ಬುತ್ತಿ ತರುವ ವಿಶೇಷ ಕಾರ್ಯಕ್ರಮ ಜರುಗಿತು.
ತಾಯಂದಿರು ಹೆಸರು ಕಾಳು ಪಲ್ಲೆ, ಕಡಬು, ಚಪಾತಿ, ರೊಟ್ಟಿ ಹಾಗೂ ವಿವಿಧ ಬಗೆಯ ಚಟ್ನಿ-ಹಿಂಡಿಗಳನ್ನು ಬಿಳಿ ಬಟ್ಟೆಯಲ್ಲಿ ಬುಟ್ಟಿಯಲ್ಲಿ ಅಲಂಕರಿಸಿ, ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿ ವಿರಕ್ತ ಮಠಕ್ಕೆ ತಲುಪಿತು. ಅಲ್ಲಿ ಶ್ರೀ ಚನ್ನವೀರ ದೇವರು ಹಾಗೂ ಇತರ ಮಠಾಧೀಶರ ಮಾರ್ಗದರ್ಶನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಎಲ್ಲರೂ ಒಗ್ಗಟ್ಟಿನಿಂದ ಪ್ರಸಾದ ಸ್ವೀಕರಿಸುವ ಮೂಲಕ ಸಂಸ್ಕೃತಿ ಮತ್ತು ಸಂಸ್ಕಾರದ ಸೌಂದರ್ಯವನ್ನು ಮೆರೆದರು.

ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಯುವಕ-ಯುವತಿಯರು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.

