ದೇವಸ್ಥಾನದ ಜಾತ್ರೆಯಲ್ಲಿ ರಥೋತ್ಸವದ ಬಳಿಕ ಭಕ್ತರು ಅಗ್ನಿಕುಂಡ ಹಾಯುವ ಪದ್ಧತಿ ಇರುವುದು ಆದರೆ ಮುಗಿದ ನಂತರ, ಈ ಗ್ರಾಮದಲ್ಲಿ ಕೆಲವು ಬಾಲಕರು ಆರಿಹೋಗುತ್ತಿದ್ದ ಕೆಂಡದ ರಾಶಿಯಲ್ಲಿ ಆಟವಾಡಲು ಮುಂದಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚೋಳಚಗುಡ್ಡ ಗ್ರಾಮದಲ್ಲಿ ನಡೆದಿದೆ.

ಜಾತ್ರೆಯ ಸಂಭ್ರಮದ ನಡುವೆಯೇ, ಕೆಲವು ಮಕ್ಕಳು ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದವರಂತೆ ಅಗ್ನಿಕುಂಡದಲ್ಲಿ ಓಡಾಡಿದ್ದು ನೆರೆದವರಲ್ಲಿ ಆತಂಕ ಮೂಡಿಸಿತು. ಅಗ್ನಿಕುಂಡದ ಪದ್ಧತಿ ಮುಗಿದ ಬಳಿಕವೂ ಮಕ್ಕಳು ಹೀಗೆ ಆಟವಾಡುವುದು ಅವರ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.
ಮುಂದಿನ ದಿನಗಳಲ್ಲಿ ಬಾದಾಮಿ ತಾಲ್ಲೂಕಿನಲ್ಲಿ ನಡೆಯಲಿರುವ ಇಂತಹ ಕಾರ್ತಿಕೋತ್ಸವ ಹಾಗೂ ಅಗ್ನಿ ಮಹೋತ್ಸವಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಒಳಿತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು. ಅಗ್ನಿ ಪ್ರವೇಶದ ಪದ್ಧತಿ ಮುಗಿದ ನಂತರ ದೇವಸ್ಥಾನದ ಆಡಳಿತವು ಅಗ್ನಿಕುಂಡದ ಸುತ್ತಲೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು. ಪದ್ಧತಿ ಪೂರ್ಣಗೊಂಡ ತಕ್ಷಣ ಭಕ್ತಾದಿಗಳಿಗೆ ಮತ್ತು ವಿಶೇಷವಾಗಿ ಮಕ್ಕಳಿಗೆ ಅಗ್ನಿಕುಂಡದ ಬಳಿ ಪ್ರವೇಶವನ್ನು ನಿಷೇಧಿಸಬೇಕು. ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ಅನಾಹುತಗಳ ಸಾಧ್ಯತೆಗಳನ್ನು ತಗ್ಗಿಸಬಹುದು ಎಂದು ಸಾರ್ವಜನಿಕರು ತಿಳಿಸಿದರು.
