ಡಿಸಿಎಂ ಡಿ.ಕೆ.ಶಿವಕುಮಾರ್ ಸಂಸ್ಕೃತ ಬಲ್ಲವರು, ಹಾಗಾಗಿ ಅಧಿವೇಶನದಲ್ಲಿ ಸಮಯಕ್ಕೆ ತಕ್ಕಂತೆ ಉತ್ತರಿಸುವ ಬದಲು ಆರ್.ಎಸ್.ಎಸ್ ಗೀತೆ ಹಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಯಾದಗಿರಿ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ ಎಸ್ಎಸ್ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದರೆ ನಾನು, ಶಾಸಕ ಚನ್ನಾರಡ್ಡಿ ಪಾಟೀಲ್ ಕೂಡ ಹಾಡುತ್ತೇವೆ ಎಂದು ವ್ಯಂಗ್ಯವಾಡಿದರು.
ಇನ್ನು ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮರೋಡಿ ಅವರನ್ನು ಒದ್ದು ಒಳಗೆ ಹಾಕಿದ್ದೇವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನೂ ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ. ರಾಜ್ಯ ರಾಜಕಾರಣದಲ್ಲಿ ಏನೇ ಬದಲಾವಣೆಯಾದರೂ ಅದಕ್ಕೆ ಹೈಕಮಾಂಡ್ ನೇರ ಕಾರಣ ಹೊರತು ರಾಜ್ಯದ ಬೇರೆ ಯಾರೂ ಅಲ್ಲ ಎಂದರು. ಮಾಜಿ ಸಚಿವ ರಾಜಣ್ಣ ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿ ಆಗಿರುವ ಘಟನೆ ವಿವರಿಸುತ್ತಾರೆ, ಮುಂದಿನದ್ದು ಹೈಕಮಾಂಡ್’ಗೆ ಬಿಟ್ಟಿದ್ದು, ವಾಲ್ಮೀಕಿ ಸಮುದಾಯ ತುಳಿಯುವ ಕೆಲಸ ಈ ಸರ್ಕಾರ ಮತ್ತು ಪಕ್ಷದಿಂದ ನಡೆಯುತ್ತಿದೆ ಎಂಬುವುದು ಶುದ್ಧ ಸುಳ್ಳು ಎಂದರು.