ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುದ್ದಾಪುರ ಗ್ರಾಮದ ಬಳಿ ಇರುವ ಜೆಕೆ ಸಿಮೆಂಟ್ ಫ್ಯಾಕ್ಟರಿ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮುಂದಾದ ಹಿನ್ನೆಲೆ, ಸುತ್ತಮುತ್ತಲಿನ ಮೂರು ಗ್ರಾಮಗಳ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುದ್ದಾಪುರ ಬಳಿ ಜೆಕೆ ಸಿಮೆಂಟ್ ಫ್ಯಾಕ್ಟರಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಇದರಿಂದಾಗಿ ಹಲಕಿ, ಬೊಮ್ಮನಬುದ್ದಿ ಮತ್ತು ನಿಂಗಾಪುರದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಯಾಕ್ಟರಿಯಿಂದ ಹೊರ ಬೀಳುವ ಧೂಳು ಮತ್ತು ಬೂದಿಯಿಂದ ಬೆಳೆಗಳು ಹಾನಿಯಾಗಿದ್ದು, ಕೆಲವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೇ ಮತ್ತೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದು, ಫ್ಯಾಕ್ಟರಿ ವಿಸ್ತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ ಕ್ವಾಲಿಟಿ ಪರಿಶೀಲನೆಗಾಗಿ ಧಾರವಾಡದ ವಲಯ ಕಚೇರಿಗೆ ಪತ್ರವನ್ನ ಬರೆದಿದೆ. ಕೂಡಲೇ ಸ್ಥಳಕ್ಕೆ ಮೊಬೈಲ್ ವ್ಯಾನ್ ಕಳುಹಿಸಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾದೇಶಿಕ ಅಧಿಕಾರಿ ಅನಿಲಕುಮಾರ್ ತಳಗೇರಿ ತಿಳಿಸಿದ್ದಾರೆ.
ಇದೇ ವೇಳೆ ಡಿಸಿ ಸಂಗಪ್ಪ, ಎಸಿ ಶ್ವೇತಾ ಬೀಡಿಕರ್ ಮತ್ತು ಅನಿಲಕುಮಾರ್ ತಳಗೇರಿ ನೇತೃತ್ವದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆ ಕೂಡ ನಡೆದಿದ್ದು, ಮಾಹಿತಿಯಿಲ್ಲದ ಕಾರಣ ಗ್ರಾಮಸ್ಥರು ಸಭೆ ಆಗಮಿಸಿಲ್ಲ. ಫ್ಯಾಕ್ಟರಿ ಪರವಲಯದ ಜನರನ್ನಷ್ಟೇ ಕರೆದು ಸಭೆ ನಡೆಸಲಾಗಿದೆ ಎಂಬ ಆಕ್ರೋಶ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಪ್ರಾರಂಭದಿಂದಲೇ ಫ್ಯಾಕ್ಟರಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಪ್ಪು ಧೂಳಿನ ಸಮಸ್ಯೆ ಇದ್ದು, ಬೆಳೆ ಹಾನಿಗೆ ಪರಿಹಾರ ನೀಡಿಲ್ಲ, ಜನ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಪುನರಾವೃತ್ತವಾಗುತ್ತಿವೆ. ಬೈಟ್
ಪರಿಸರದ ಸುರಕ್ಷತೆ ಹಾಗೂ ಸ್ಥಳೀಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ವರದಿ ಹಾಗೂ ಪರಿಶೀಲನೆ ನಡೆಸಿ ಫ್ಯಾಕ್ಟರಿ ವಿಸ್ತರಣೆಗೆ ಕ್ರಮಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.