ಬಡತನ ಅನ್ನೋದು ಅವರ ಮನೆಯ ನಿತ್ಯದ ಅತಿಥಿ. ಆದರೂ ‘ನಾನು ಬದುಕಿನಲ್ಲಿ ಏನಾದರೂ ದೊಡ್ಡದು ಸಾಧಿಸಬೇಕು’ ಎಂಬ ದೃಢ ನಿಶ್ಚಯ ಮಾಡಿಕೊಂಡು, ಹೊಲದಲ್ಲಿ ಪವರ್ ಟ್ರೈಲರ್ ನಿಂದ, ಬಿತ್ತನೆ ಮಾಡುತ್ತಾ, ಬೆಳೆ ಬೆಳೆಸಿ, ಈಗ ಗೌಂಡವಾಡದ ಯುವತಿ ವಕೀಲೆಯಾಗಿ ಹೊರಹೊಮ್ಮಿದ್ದಾಳೆ..
ಹೌದು, ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಛತ್ರಪತಿ ಶಿವಾಜೀ ಗಲ್ಲಿಯ ನೀತಾ ವಿನೋದ ಪವಾರ್ ತಮ್ಮ ಪತಿಯ ಊರು ಕೊಲ್ಹಾಪುರ ಜಿಲ್ಲೆಯ ಚಂದಗಢ ತಾಲೂಕಿನ ಮಹಿಪಾಲಗಡದಲ್ಲಿ ಪ್ರಪ್ರಥಮ ಮಹಿಳಾ ವಕೀಲಳಾಗಿ ಹೊರಹೊಮ್ಮಿದ್ದಾಳೆ.
ತಂದೆ ಕೃಷಿಕರು, ತಾಯಿ ತರಕಾರಿಗಳನ್ನು ಮಾರಾಟಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ನರೇಗಾ ಯೋಜನೆಯಲ್ಲಿ ಸಿಕ್ಕಿತ್ತು.. ಆದರೇ, ಹೊಲ ಗೆಲಸವೇ ಕುಟುಂಬದ ಮೂಲವಾಗಿತ್ತು. ತಂದೆಯೊಂದಿಗೆ ಸೇರಿ ಹೊಲದಲ್ಲಿ ಪವರ್ ಟ್ರೈಲರ್ ಓಡಿಸಿ ಪುರುಷರ ಸಮಾನವಾದ ಕೆಲಸವನ್ನು ನೀತಾ ಮಾಡುತ್ತಿದ್ದಳು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮಹಾತ್ಮಾ ಗಾಂಧಿ ಹೈಸ್ಕೂಲ್, ಗೌಂಡವಾಡದಲ್ಲಿ ಮುಗಿಸಿದಳು. ನಂತರ ಜ್ಯೋತಿ ಕಾಲೇಜಿನಲ್ಲಿ 12ನೇ ತರಗತಿ (ಕಾಮರ್ಸ್) ಪೂರ್ಣಗೊಳಿಸಿ, ಭಾವುರಾವ್ ಕಾಕತಕರ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಳು. ತಂದೆ-ತಾಯಿ ಬಡವರಾಗಿದ್ದರೂ, ಮಗಳನ್ನು ವಕೀಲೆಯಾಗಿಸಲು ನಿರ್ಧರಿಸಿದರು.
ನೀತಾ ಬಿ.ವಿ. ಬೆಲ್ಲದ ಲಾ ಕಾಲೇಜಿನಲ್ಲಿ ಪ್ರವೇಶ ಪಡೆದು, ಕಠಿಣ ಪರಿಶ್ರಮದಿಂದ ಓದು ಮುಂದುವರಿಸಿದರು.ಕಾಲೇಜಿನಲ್ಲಿದ್ದಾಗಲೇ ಮದುವೆಗಾಗಿ ಸಂಬಂಧಗಳು ಬಂದವು. ಆದರೆ ಆಕೆ ಹೇಳಿದಳು – “ನಾನು ಮೊದಲು ಓದು ಮುಗಿಸಬೇಕು.” ಮಹಿಪಾಳಗಡದ ಭೋಗಣ ಕುಟುಂಬ ಮದುವೆಯಾದ ಬಳಿಕ ಓದುವ ಸಹಾಯ ನೀಡುವುದಾಗಿ ಹೇಳಿತು. ಇತರ ಅನುಕೂಲಗಳ ಕಾರಣದಿಂದ ಮದುವೆ ನಡೆಸಲಾಯಿತು. ಪತಿ ಅಭಿಜೀತ ಭೋಗಣ ಮತ್ತು ಕುಟುಂಬ ಸಹಕಾರದಿಂದ ಇಂದು ನೀತಾ ಪವಾರ ವಕೀಲೆಯಾಗಿದ್ದಾಳೆ.