ಹುಬ್ಬಳ್ಳಿ: ಬಾಲಕಿ ಮೇಲೆ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಜನರ ಮನಸ್ಸಿಗೆ ತುಂಬಾ ಘಾಸಿಗೊಳಿಸಿದೆ. ಈ ರೀತಿ ಪ್ರಕರಣ ನಡೆಯಬಾರದಿತ್ತು, ಮೃತ ಬಾಲಕಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು. ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಸೈಕೋಪಾತ್ ಓರ್ವ ಐದು ವರ್ಷದ ಬಾಲಕಿಯನ್ನು ಹತ್ಯೆ ಮಾಡಿರುವ ಹಿನ್ನೆಲೆ ಇಂದು ಮೃತ ಬಾಲಕಿ ಮನೆಗೆ ಭೇಟಿ ನೀಡಿ, ತಂದೆ-ತಾಯಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, ಬಾಲಕಿಯ ತಂದೆ ತಾಯಿ ಅತ್ಯಂತ ಬಡಕುಟುಂಬದವರು, ಈ ರೀತಿ ಬಾಲಕಿ ಮೇಲೆ ನಡೆಸಿರುವ ಕೃತ್ಯ ಅತ್ಯಂತ ರಾಕ್ಷಸಿ ಕೃತ್ಯ, ಈ ಬಗ್ಗೆ ಅಧಿಕಾರಿಗಳ ಜೊತೆಗೂ ಸಹ ನಾನು ಮಾತನಾಡಿದ್ದೇನೆ. ಪೊಲೀಸರು ಈ ಬಗ್ಗೆ ಶೀಘ್ರವೇ ಕ್ರಮಕೈಗೊಂಡಿದ್ದಾರೆ ಎಂದರು.
ಈ ರೀತಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನ್ಯಾಯ ಕೊಡಿಸಿರುವುದು ಅತ್ಯಂತ ಶ್ಲಾಘನೀಯ, ಮಹಿಳಾ ಪಿಎಸ್ ಐ ಕಾರ್ಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ರಾಜ್ಯದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ, ಆದ್ರೆ ಇತ್ತೀಚೆಗೆ ಗೃಹ ಸಚಿವರು ಇಂತಹ ಪ್ರಕರಣಗಳ ವಿಚಾರದಲ್ಲಿ ಬೇಜಾವಾಬ್ದಾರಿತನದ ಹೇಳಿಕೆ ನೀಡಿದ್ರು, ಇಂತಹ ಹೇಳಿಕೆ ನೀಡುವುದು ಒಬ್ಬ ಗೃಹಮಂತ್ರಿಗೆ ಶೋಭೆ ತರುವಂತದ್ದಲ್ಲ ಎಂದಿದ್ದಾರೆ.
ಇನ್ನು ನಗರದ ಪ್ರದೇಶಗಳಲ್ಲಿ ಗಾಂಜಾ ಸೇವನೆ, ಗಾಂಜಾ ಮಾರಾಟ ಯಥೇಚ್ಚವಾಗಿ ನಡೆಯುತ್ತಿದೆ. ಈ ವಿಚಾರದಲ್ಲಿ ಗಾಂಜಾ ಮಾರಾಟ ಮೂಲವನ್ನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಮುಂದಾಗಬೇಕು. ಗಾಂಜಾ ಮೂಲವನ್ನ ಪತ್ತೆಹಚ್ಚು ಕೆಲಸಕ್ಕೆ ಮುಂದಾದ್ರೆ ಮಾತ್ರ ಇಂತಹ ಪ್ರಕರಣಗಳನ್ನ ತಡೆಗಟ್ಟಲು
ಸಾಧ್ಯ ಎಂದು ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ, ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರ ಮುಂದಾಗಬೇಕು, ಮೃತ ಬಾಲಕಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.