Chikkamagalur

ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ: ಮೂವರು ಗಂಭೀರ

Share

ಚಿಕ್ಕಮಗಳೂರು: ಅಡ್ಡ ಬಂದ ಜಿಂಕೆ ತಪ್ಪಿಸಲು ಹೋಗಿ ಕಾರು (Car) ಅಪಘಾತಗೊಂಡ (Accident) ಘಟನೆ ಕಳಸದ (Kalasa) ಸಂಪಿಖಾನ್ ಬಳಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಲಿಸುತ್ತಿದ್ದ ವೇಳೆ ಹಠಾತ್ ಆಗಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಂಕೆ ದಾಟಿದೆ. ಈ ವೇಳೆ ಕಾರು ಚಾಲಕ ಜಿಂಕೆಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿಯಾಗಿದೆ. ಕೂಡಲೇ ಕಾರಿನಲ್ಲಿದ್ದ ಮೂವರಿಗೆ ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಣಿಪಾಲ್‍ಗೆ ರವಾನಿಸಿದ್ದಾರೆ

ಕಾರಿನಲ್ಲಿದ್ದವರು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ಮಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳಸ ತಾಲೂಕಿನಲ್ಲಿ ಇತ್ತೀಚಿಗೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡು ಕೋಣ ದಾಳಿ ಮಾಡಿತ್ತು. ಇನ್ನೊಂದು ಕಡೆ ಬೈಕಿನ ಮೇಲೆ ಕಾಡುಕೋಣ ಜಿಗಿದಿತ್ತು.

ಅಲ್ಲದೇ ತೋಟದಲ್ಲಿ ಕೆಲಸ ಮಾಡುವ ವೃದ್ಧನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿತ್ತು. ಹಲವೆಡೆ ಎತ್ತರದ ಪ್ರದೇಶದಿಂದ ಏಕಾಏಕಿ ವಾಹನಗಳಿಗೆ ಅಡ್ಡಿ ಬರುತ್ತವೆ. ಈ ಬಗ್ಗೆ ಅರಣ್ಯ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ

Tags:

error: Content is protected !!