Belagavi

ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ ; ಅಧ್ಯಕ್ಷ ರೋಹನ್ ಜುವಳಿ

Share

ವೈಶ್ಯ ಸಮಾಜದ ವಿವಿಧ ಉಪಜಾತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಸಮುದಾಯದವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ಶ್ರೀ ವೈಶ್ಯ ಗರಿಮಾ ಮಂಚದ ವತಿಯಿಂದ ಸೆಪ್ಟೆಂಬರ್ 6ರಂದು ಬೆಳಗಾವಿಯಲ್ಲಿ ಸ್ಥಾಪನಾ ದಿನ ಹಾಗೂ ವೈಶ್ಯ ಸಮ್ಮೇಳನ–2026 ಆಯೋಜಿಸಲಾಗಿದೆ ಎಂದು ಶ್ರೀ ವೈಶ್ಯ ಗರಿಮಾ ಮಂಚ್ ಕರ್ನಾಟಕ ಪ್ರದೇಶ ಅಧ್ಯಕ್ಷ ರೋಹನ್ ಜುವಳಿ ಅವರು ಮಾಹಿತಿ ನೀಡಿದರು.

ಬೆಳಗಾವಿ ನಗರದ ರೈಲ್ವೆ ಓವರ್‌ಬ್ರಿಡ್ಜ್ ಸಮೀಪದ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಮ್ಮೇಳನ ನಡೆಯಲಿದೆ. ವೈಶ್ಯ ಸಮಾಜದ ಏಕತೆ, ಪ್ರಗತಿ ಹಾಗೂ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ವಿಶೇಷ ಸಮಾವೇಶದಲ್ಲಿ ಸಮಾಜದ ವಿವಿಧ ಸಂಘಟನೆಗಳು, ಮುಖಂಡರು ಹಾಗೂ ಸಮುದಾಯದ ಪ್ರಮುಖರು ಭಾಗವಹಿಸಲಿದ್ದಾರೆ. ವೈಶ್ಯ ಸಮಾಜದ ಎಲ್ಲ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ವಿವಿಧ ಉಪಜಾತಿಗಳು ಮತ್ತು ಪ್ರದೇಶಗಳಲ್ಲಿ ಹರಡಿಕೊಂಡಿರುವ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಾಮೂಹಿಕವಾಗಿ ಸಮಾಜದ ಭವಿಷ್ಯ ರೂಪಿಸುವ ಕುರಿತು ಚರ್ಚೆ ನಡೆಸಲು ಸಮ್ಮೇಳನ ವೇದಿಕೆಯಾಗಲಿದೆ.
ವೈಶ್ಯ ಸಮಾಜದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಸಮ್ಮೇಳನದ ಮತ್ತೊಂದು ಪ್ರಮುಖ ಆಶಯವಾಗಿದೆ. ಯುವಕರಿಗೆ ಉದ್ಯಮ ಕ್ಷೇತ್ರದಲ್ಲಿ ಅವಕಾಶಗಳನ್ನು ಸೃಷ್ಟಿಸುವುದು, ಪರಸ್ಪರ ಸಹಕಾರದ ಮೂಲಕ ಬಲಿಷ್ಠ ಬಿಸಿನೆಸ್ ನೆಟ್‌ವರ್ಕ್ ನಿರ್ಮಿಸುವುದು ಹಾಗೂ ಉದ್ಯಮ ಆರಂಭಿಸಲು ಮತ್ತು ವಿಸ್ತರಿಸಲು ಅಗತ್ಯವಿರುವ ಸಂಪರ್ಕ ಹಾಗೂ ಸಹಕಾರವನ್ನು ಬೆಳೆಸುವ ಕುರಿತು ಚಿಂತನೆ ನಡೆಯಲಿದೆ.
ಸಮುದಾಯದ ಆರ್ಥಿಕ ಪ್ರಗತಿಗೆ ಪೂರಕವಾಗಿ ಯುವ ಉದ್ಯಮಿಗಳಿಗೆ ಪರಸ್ಪರ ಮಾರ್ಗದರ್ಶನ, ಸಂಪರ್ಕ ಮತ್ತು ಸಹಭಾಗಿತ್ವದ ವೇದಿಕೆ ರೂಪಿಸುವ ಉದ್ದೇಶವೂ ಸಮ್ಮೇಳನದಲ್ಲಿದೆ.ಸಾಮಾಜಿಕ ಕಲ್ಯಾಣಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಸೇವಾ ಕ್ಷೇತ್ರಗಳಲ್ಲಿ ಸಮುದಾಯದ ಸದಸ್ಯರು ಒಗ್ಗೂಡಿ ಕಾರ್ಯನಿರ್ವಹಿಸುವ ವೇದಿಕೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸಮಾಜದ ಅಗತ್ಯವಿರುವವರಿಗೆ ನೆರವು ನೀಡುವುದು ಹಾಗೂ ವಿವಿಧ ಸೇವಾ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು.ಅಲ್ಲದೆ, ವೈಶ್ಯ ಸಮಾಜದ ಸಾಮೂಹಿಕ ಧ್ವನಿಯನ್ನು ಬಲಪಡಿಸಿ, ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪರಿಹರಿಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಯೋಜನೆ ರೂಪಿಸುವ ಗುರಿಯನ್ನು ಸಂಘಟಕರು ಹೊಂದಿದ್ದಾರೆ. ಸಮ್ಮೇಳನಕ್ಕೆ ರಾಷ್ಟ್ರೀಯ ಅಧ್ಯಕ್ಷ ಶತ್ರುಘ್ನ ಶಹ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಅಗ್ರವಾಲ್, ಸಂರಕ್ಷಕ ವಿಜಯಕುಮಾರ ಗರ್ಗ್ (Retd. IPS), ರಾಷ್ಟ್ರೀಯ ಕೋಶಾಧ್ಯಕ್ಷ ಜಯ ಕಿಶೋರ್ ಪ್ರಸಾದ್, ಕರ್ನಾಟಕ ಪ್ರದೇಶ ಅಧ್ಯಕ್ಷ ರೋಹನ್ ಜುವಳಿ, ಕರ್ನಾಟಕ ಪ್ರದೇಶ ಕಾರ್ಯದರ್ಶಿ ದತ್ತಾ ಕಣಬರ್ಗಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮುಂದಡ ಹಾಗೂ ಜಿಲ್ಲಾ ಕಾರ್ಯದರ್ಶಿ ರಮೇಶ್ ಲದ್ದಡ ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ.. ಇವರೊಂದಿಗೆ ವೈಶ್ಯವಾಣಿ ಸಮಾಜ, ಕನ್ನಡ ವೈಶ್ಯ ಸಮಾಜ, ಮಾಹೇಶ್ವರಿ ಸಮಾಜ, ಗುಜರಾತಿ ವೈಶ್ಯ ಸಮಾಜ, ಅಗ್ರವಾಲ್ ಸಮಾಜ, ಆರ್ಯವೈಶ್ಯ ಸಮಾಜ, ಸಿಂಧಿ ಸಮಾಜ ಸೇರಿದಂತೆ ಸಮಸ್ತ ವೈಶ್ಯ ಸಮಾಜದ ಪ್ರತಿನಿಧಿಗಳು ಹಾಗೂ ಆಯೋಜನಾ ಸಮಿತಿ ಕಾರ್ಯಕಾರಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.“ವೈಶ್ಯ ಸಮಾಜದ ಏಕತೆ, ಪ್ರಗತಿ ಮತ್ತು ಗೌರವ” ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನವು ಬೆಳಗಾವಿಯಲ್ಲಿ ವೈಶ್ಯ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ಉಪಜಾತಿಗಳನ್ನು ಒಂದೇ ವೇದಿಕೆಯಡಿ ತರುವ ಮಹತ್ವದ ಪ್ರಯತ್ನವಾಗಿದೆ. ಸಮಾಜದ ಎಲ್ಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಏಕತೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಶ್ರೀ ವೈಶ್ಯ ಗರಿಮಾ ಮಂಚ್‌ನ ಗೌರವ ಕಾರ್ಯದರ್ಶಿ ದತ್ತಾ ಕಣಬರ್ಗಿ (ವೈಶ್ಯ ವಾಣಿ ಸಮಾಜ), ಬೆಳಗಾವಿ ಜಿಲ್ಲಾ ಶ್ರೀ ವೈಶ್ಯ ಗರಿಮಾ ಮಂಚ್ ಅಧ್ಯಕ್ಷ ರಾಜೇಂದ್ರ ಮುಂದಡಾ, ಸಿಎ (ಮಹೇಶ್ವರಿ ಸಮಾಜ), ಗೌರವ ಕಾರ್ಯದರ್ಶಿ ರಮೇಶ್ ಲದ್ದಡ್ (ಗುಜರಾತಿ ವೈಶ್ಯ ಸಮಾಜ), ಡಾ. ಶ್ರೀಧರ ಶೆಟ್ಟಿ (ಕನ್ನಡ ವೈಶ್ಯ ಸಮಾಜ), ಸಂತೋಷ ವಡವಾ (ಸಿಂಧಿ ಸಮಾಜ), ಪ್ರಮೋದ್ ಅಗರ್ವಾಲ್ (ಅಗರ್ವಾಲ್ ಸಮಾಜ) ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!