ಬೆಳಗಾವಿಯ ಪ್ರತಿಷ್ಠಿತ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಕೇಂದ್ರದಲ್ಲಿ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೆ ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟಿ, ಇಡೀ ದೇಶವೇ ನಿಮ್ಮೊಂದಿಗೆ ಇದೆ ಎಂಬ ಸಂದೇಶವನ್ನು ಸಾರಿದರು.

ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಕೇಂದ್ರದಲ್ಲಿ ರಕ್ಷಾ ಬಂಧನ ಹಬ್ಬವನ್ನು ಅತ್ಯಂತ ಸಡಗರ ಮತ್ತು ಪರಂಪರೆಯೊಂದಿಗೆ ಆಚರಿಸಲಾಯಿತು. ಸಮಾಜ ಹಾಗೂ ಸೈನಿಕರ ನಡುವಿನ ಭದ್ರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿ ಯೋಧರಿಗೆ ರಾಖಿ ಕಟ್ಟಿದರು.
ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಹಾಗೂ ಅವರ ಪತ್ನಿ ವೀದಾ ಉಪಾಧ್ಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸುಮಾರು 238 ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ದೇಶ ಕಾಯುವ ಯೋಧರ ಕೈಗೆ ರಾಖಿ ಕಟ್ಟುವ ಮೂಲಕ ದೇಶಪ್ರೇಮ ಮೆರೆದ ವಿದ್ಯಾರ್ಥಿಗಳಿಗೆ, ಇದು ಸೈನಿಕರ ತ್ಯಾಗ-ಬಲಿದಾನಗಳನ್ನು ಹತ್ತಿರದಿಂದ ಅರಿಯಲು ಸಿಕ್ಕ ಅಪೂರ್ವ ಅವಕಾಶವಾಗಿತ್ತು.
