ಸಾಂಸ್ಕೃತಿಕ ನಗರಿ ಬೆಳಗಾವಿಯಲ್ಲಿ ‘ಸುವರ್ಣ ಪಂಚಕಮ್’ ನೃತ್ಯೋತ್ಸವ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ದಿವ್ಯಜ್ಯೋತಿ ನಾಟ್ಯಾಲಯ ಹಾಗೂ ರವಿ ನೃತ್ಯ ಕಲಾ ಮಂದಿರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ನೃತ್ಯ ಕಲಾವಿದರು ಮತ್ತು ಗಣ್ಯರು ಭಾಗವಹಿಸಿ ಸಾಂಸ್ಕೃತಿಕ ಸಂಭ್ರಮಕ್ಕೆ ಕಳೆ ತುಂಬಿದರು.



ಬೆಳಗಾವಿಯ ಕುಮಾರ್ ಗಂಧರ್ವ ಕಲಾ ಮಂದಿರದಲ್ಲಿ ಇಂದು ಭಾನುವಾರ ನಡೆದ ‘ಸುವರ್ಣ ಪಂಚಕಮ್’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಳಗಾವಿ ಪೊಲೀಸ್ ಕಮಿಷನರ್ ಆದ ಭೂಷಣ್ ಬೋರಸೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಇಂತಹ ನೃತ್ಯ ಶಾಲೆಗಳ ಪಾತ್ರ ಹಿರಿದು ಎಂದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಉಪ ಪೊಲೀಸ್ ಕಮಿಷನರ್ ನಾರಾಯಣ್ ಬರಮನಿ ಉಪ ಪೊಲೀಸ್ ಕಮಿಷನರ್ ಎನ್. ನಿರಂಜನ್ ರಾಜ್ ಅರಸ್ ಹಾಗೂ ನಗರಸೇವಕಿ ಲಕ್ಷ್ಮಿ ರಾಥೋಡ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ನ ವಿಶೇಷ ಸಂಪರ್ಕ ಪ್ರಮುಖರಾದ ಡಾ. ಬಸವರಾಜ್ ಭಾಗೋಜಿ ಸಹ ಗಣ್ಯರಾಗಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ದಿವ್ಯಜ್ಯೋತಿ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಹಾಗೂ ಎಸ್ಎನ್ಎ ಯುವ ಪ್ರಶಸ್ತಿ ಪುರಸ್ಕೃತ, ಪ್ರಖ್ಯಾತ ಕಥಕ್ ನೃತ್ಯಗಾರ ಡಾ. ಲಕ್ಷ್ಮೀನಾರಾಯಣ ಜೇನಾ ಅವರಿಂದ ಅದ್ಭುತ ನೃತ್ಯ ಪ್ರದರ್ಶನ ಜರುಗಿತು.


ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಗುರು ವಿದ್ವಾನ್ ಟಿ. ರವೀಂದ್ರ ಶರ್ಮ, ಗುರು ವಿದುಷಿ ಭಾರತಿ ಎಂ. ಭಟ್ ಮತ್ತು ಗುರು ವಿದುಷಿ ಶಾಂತಾಲಕ್ಷ್ಮಿ ನಾಗರಾಜನ್ ಹಾಗೂ ಪ್ರೇಮಾ ಉಪಾಧ್ಯೆ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ 2025ರ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಡಾ. ವಿದುಷಿ ಸ್ಪೂರ್ತಿ ಕೊಂಕಣಿ ಹಾಗೂ ವಿದುಷಿ ಸೃಷ್ಟಿ ಕೊಂಕಣಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
