Belagavi

ಶಿಂಧೋಳಿ, ಬಡಾಲ ಅಂಕಲಗಿಯಲ್ಲಿ ಆಧುನಿಕ ಬಸ್ ತಂಗುದಾಣ ಉದ್ಘಾಟಿಸಿ ಮಾಜಿ ಸಂಸದ ಈರಣ್ಣ ಕಡಾಡಿ ಭರವಸೆ

Share

ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಮಳೆ-ಗಾಳಿಯ ಸಂದರ್ಭದಲ್ಲಿ ಆಸರೆಯಾಗಲು ಈ ಆಧುನಿಕ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಜನತೆಯ ಬೇಡಿಕೆಗಳಿಗೆ ತಕ್ಕಂತೆ ಸಂಸದರ ನಿಧಿಯನ್ನು ಸಂಪೂರ್ಣವಾಗಿ ಅರ್ಹ ಮತ್ತು ಅಗತ್ಯವಿರುವ ಕೆಲಸಗಳಿಗೆ ಬಳಸಲಾಗಿದೆ. ಮುಂಬರುವ ದಿನಗಳಲ್ಲೂ ಗ್ರಾಮೀಣ ಭಾಗದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸದಾ ನನ್ನ ಬೆಂಬಲವಿರಲಿದೆ ಎಂದು ಮಾಜಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ಜು-06 ರಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯ ಶಿಂಧೋಳಿ ಮತ್ತು ಬಡಾಲ ಅಂಕಲಗಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರಯಾಣಿಕರ ಬಸ್ ತಂಗುದಾಣಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಈರಣ್ಣ ಕಡಾಡಿ ಅವರು, “ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲಿರದೆ, ತಳಮಟ್ಟದ ಜನರನ್ನು ತಲುಪಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗುತ್ತದೆ. ನನ್ನ ಸಂಸದರ ನಿಧಿಯ ಪ್ರತಿಯೊಂದು ಪೈಸೆಯನ್ನೂ ಸಾರ್ವಜನಿಕರ ಹಿತಕ್ಕಾಗಿ ಅತ್ಯಂತ ಪಾರದರ್ಶಕವಾಗಿ ಸದುಪಯೋಗಪಡಿಸಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲೂ ಗ್ರಾಮೀಣ ಭಾಗದ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ನನ್ನ ಬೆಂಬಲ ಸದಾ ಇರಲಿದೆ” ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಮಾಜಿ ಅಧ್ಯಕ್ಷರಾದ ಧನಂಜಯ ಜಾಧವ ಮಾತನಾಡಿ, “ಈ ಎರಡು ಗ್ರಾಮಗಳ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೂಕ್ತ ಬಸ್ ನಿಲ್ದಾಣದ ಸೌಕರ್ಯವಿಲ್ಲದೆ ಮಳೆ ಮತ್ತು ತೀವ್ರ ಬಿಸಿಲಿನಲ್ಲಿ ನಿತ್ಯವೂ ತೊಂದರೆ ಅನುಭವಿಸುತ್ತಿದ್ದರು. ಗ್ರಾಮೀಣ ಭಾಗದ ಈ ಜ್ವಲಂತ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಮಾಜಿ ಸಂಸದ ಈರಣ್ಣ ಕಡಾಡಿ ಅವರು, ತಮ್ಮ ಸಂಸದರ ನಿಧಿಯಿಂದ ಅಗತ್ಯ ಅನುದಾನ ಮಂಜೂರು ಮಾಡಿ ಈ ಸುಸಜ್ಜಿತ ಆಧುನಿಕ ತಂಗುದಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಸಾರ್ವಜನಿಕ ಆಸ್ತಿಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಂಡು ಸದುಪಯೋಗ ಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಜನರಲ್ಲಿ ಮನವಿ ಮಾಡಿದರು.

ಸಂಸದರ ಕಾರ್ಯವೈಖರಿಗೆ ಶ್ಲಾಘನೆ:
​ಕಾರ್ಯಕ್ರಮದಲ್ಲಿ ಧನಂಜಯ ಜಾಧವ ಸಂಸದರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಸಾಮಾನ್ಯವಾಗಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಸುಮ್ಮನಾಗುವವರ ನಡುವೆ, ಸಂಸದ ಈರಣ್ಣ ಕಡಾಡಿ ಅವರ ನಡೆ ವಿಭಿನ್ನವಾಗಿದೆ. ಇವರು ಕೇವಲ ಅನುದಾನ ಮಂಜೂರು ಮಾಡಿಸುವುದಷ್ಟೇ ಅಲ್ಲದೆ, ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗುವವರೆಗೂ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಾರೆ. ಇದು ಒಬ್ಬ ನಿಜವಾದ ಜನನಾಯಕ ಹಾಗೂ ಕರ್ತವ್ಯನಿಷ್ಠ ಕಾರ್ಯಕರ್ತನ ಲಕ್ಷಣ” ಎಂದು ಕೊಂಡಾಡಿದರು.

ಶಿಂದೊಳ್ಳಿ ಗ್ರಾಮದ ಸತೀಶ್ ಶಹಾಪೂರಕರ, ಸದಸ್ಯರಾದ ಬಾಬಾಗೌಡ ಪಾಟೀಲ್, ಪಿರಾಜಿ ಅನಗೋಳಕರ,ಸವಿತಾ ಮುಚ್ಚಂಡಿ, ಪಿರಾಜಿ ಕಣಬರಗಿ, ಮರೆಪ್ಪ ಶಹಾಪೂರಕರ ಬಡಾಲ ಅಂಕಲಗಿ ಗ್ರಾಮದ ಅಶೋಕ ಚಾಪಗಾಂವ, ಪಿಂಟು ಕಮತಗಿ, ರಮೇಶ ಕಲ೦ಬಾವಿ, ಬಸವರಾಜ ಕಮತಗಿ, ರಾಹುಲ ಬೆಳಗಾವಿ, ಶಿವಪ್ಪ ಬೆಳಗಾವಿ, ರಮೇಶ ಸೇರಿದಂತೆ ಸ್ಥಳೀಯ ಮುಖಂಡರು , ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!