ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಹೊಸ ಕಳೆಯನ್ನು ತಂದಿದೆ. ಬೈಲಹೊಂಗಲ ತಾಲೂಕಿನ ಐತಿಹಾಸಿಕ ಸೊಗಲ ಶ್ರೀಕ್ಷೇತ್ರದಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರಕೃತಿಯ ಈ ನಯನಮನೋಹರ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದು ಬರುತ್ತಿದೆ.

ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲಾದ್ಯಂತ ವರುಣದೇವ ಅಬ್ಬರಿಸುತ್ತಿದ್ದು, ಇದರ ಪರಿಣಾಮವಾಗಿ ಬೈಲಹೊಂಗಲ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಸೊಗಲದಲ್ಲಿ ಜಲಪಾತಗಳು ಸೃಷ್ಟಿಯಾಗಿವೆ. ಸುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಬೆಟ್ಟದ ಮೇಲಿಂದ ಹಾಲುಬೆಳ್ಳಗಿನ ನೀರು ಧುಮ್ಮಿಕ್ಕುತ್ತಿದ್ದು, ಇಡೀ ಕ್ಷೇತ್ರಕ್ಕೆ ದೇವಲೋಕದ ಕಳೆ ಬಂದಂತಾಗಿದೆ. ಸೊಗಲ ಸೋಮೇಶ್ವರ ದರ್ಶನಕ್ಕೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಎಂದೂ ಕಾಣದ ಈ ರಮಣೀಯ ದೃಶ್ಯವನ್ನು ಕಂಡು ಮಂತ್ರಮುಗ್ಧರಾಗುತ್ತಿದ್ದಾರೆ. ಜಲಪಾತದ ರಂಗು ಹಾಗೂ ಪ್ರಕೃತಿಯ ಮಡಿಲಿನಲ್ಲಿ ತಣ್ಣಗಿನ ವಾತಾವರಣ ಸೃಷ್ಟಿಯಾಗಿದ್ದು, ಜನರೆಲ್ಲಾ ತಮ್ಮ ಮೊಬೈಲ್ಗಳಲ್ಲಿ ಈ ಅದ್ಭುತ ದೃಶ್ಯವನ್ನು ಸೆರೆಹಿಡಿದು ಸಂಭ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಮಳೆಯ ಆರ್ಭಟವು ಧಾರ್ಮಿಕ ಧಾಮಕ್ಕೆ ಪ್ರವಾಸಿ ತಾಣದ ಮೆರುಗನ್ನು ನೀಡಿದೆ.

