BELAGAVI

ನಿತ್ಯವೂ ಪರಿಸರ ದಿನವಾಗಲಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

Share

ನಾಡಿನ ನೆಲ-ಜಲ, ಅರಣ್ಯ, ಪರಿಸರ, ವನ್ಯಜೀವಿಗಳು, ಜೀವ-ವೈವಿಧ್ಯ ಮತ್ತು ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ. ಪರಿಸರ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು , ಜೂನ್ 5 ರಂದು ಮಾತ್ರ ಈ ಕುರಿತು ಆಲೋಚಿಸಲಾಗುತ್ತಿದೆ. ಇದರ ಬದಲಿಗೆ ಪ್ರಕೃತಿಯಲ್ಲಿನ ಎಲ್ಲ ಜೀವರಾಶಿಗಳಿಗೆ ಅನ್ನ, ಆಶ್ರಯ ನೀಡಿರುವ ಪರಿಸರದ ಕುರಿತು ಪ್ರತಿದಿನ ಚಿಂತಿಸುವ ಅಗತ್ಯತೆ ಇದೆ. ಕಾರಣ ನಿತ್ಯವೂ ಪರಿಸರ ದಿನವಾಗಲಿ ಎಂದು‌ ಯಡೆಯೂರು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಇಲ್ಲಿನ ಶಿವಬಸವ ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸಸಿ ನೆಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಜಿ.ಬಿ.ಐ.ಟಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಫ್. ವಿ. ಮಾನ್ವಿ ಮಾತನಾಡಿ ಹಸಿರು ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ ಶರಣಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಲೇಜು ಆವರಣ‌ ಹಾಗೂ ಮಹಾನಗರ ಪಾಲಿಕೆಯಿಂದ ದತ್ತು ಪಡೆದ ಮಾಹಾವಿದ್ಯಾಲಯದ ಮುಂಭಾಗದ ರಸ್ತೆ ವಿಭಜಕಗಳಲ್ಲಿ ವಿವಿಧ ಜಾತಿಯ ನೆರಳು ನೀಡುವ ಹಣ್ಣು ಹಾಗೂ ಔಷಧೀಯ ಸಸಿಗಳನ್ನು ಎನ್.ಎಸ್.ಎಸ್‌ ಘಟಕದ ವತಿಯಿಂದ ನೆಡಲಾಯಿತು.

Tags:

error: Content is protected !!