ಬೆಳಗಾವಿಯ ಹಿಂದವಾಡಿಯ ಗಣೇಶ ಮಾರ್ಗದಲ್ಲಿ ಕುಡಿಯುವ ನೀರಿನ ಪೈಪ್ಲೈನ್ನಲ್ಲಿ ಚರಂಡಿ ನೀರು ಮಿಶ್ರಣವಾಗುತ್ತಿದ್ದ ಗಂಭೀರ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸ್ಥಳೀಯರ ದೂರಿನ ಮೇರೆಗೆ ನಗರಸೇವಕ ನಿತೀನ್ ಜಾಧವ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.


ಬೆಳಗಾವಿಯ ಹಿಂದವಾಡಿಯ ಗಣೇಶ ಮಾರ್ಗದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತಿತ್ತು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಗಳು ನಗರಸೇವಕ ನಿತೀನ್ ಜಾಧವ್ ಅವರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ನಗರಸೇವಕರು, ಮಹಾನಗರ ಪಾಲಿಕೆ ಹಾಗೂ ಎಲ್ ಅಂಡ್ ಟಿ (L&T) ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದರು.

ಬಹಳ ಹೊತ್ತಿನ ತಾಂತ್ರಿಕ ತಪಾಸಣೆಯ ನಂತರ, ಸ್ಥಳೀಯ ನಿವಾಸಿಯೊಬ್ಬರ ಚರಂಡಿ ಪೈಪ್ ಬ್ಲಾಕ್ ಆಗಿ ಆ ನೀರು ಕುಡಿಯುವ ನೀರಿನ ಪೈಪ್ಲೈನ್ಗೆ ಸೋರಿಕೆಯಾಗುತ್ತಿರುವುದು ಪತ್ತೆಯಾಯಿತು. ತಕ್ಷಣವೇ ದುರಸ್ತಿ ಕಾರ್ಯ ಕೈಗೊಂಡು ಕಲುಷಿತ ನೀರು ಮಿಶ್ರಣವಾಗುವುದನ್ನು ತಡೆಗಟ್ಟಲಾಯಿತು. ಹಲವು ದಿನಗಳ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದ್ದರಿಂದ ನಾಗರಿಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ನಗರಸೇವಕಿ ಸಂಯೋಗಿತಾ ಹಲಗೇಕರ್, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಎಲ್ ಅಂಡ್ ಟಿ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.
